ಜಿಲ್ಲಾ ಸುದ್ದಿ

ಗೆಲವಿಗೆ ರಾಜಕೀಯ ಸೂತ್ರ ಅಗತ್ಯ: ಸಿ.ಟಿ.ರವಿ

Manjula VN

ಬೆಂಗಳೂರು: ಜಿಪಂ ಮತ್ತು ತಾಪಂ ಚುನಾವಣೆಯಲ್ಲಿ ಕಾಂಗ್ರೆಸ್  ಮತ್ತು ಜೆಡಿಎಸ್ ಪಕ್ಷದ ಮತದಾರರನ್ನುಸ್ನೇಹದಿಂದ ಬಿಜೆಪಿಗೆ ಸೇರಿಸಿಕೊಂಡರೆ ಗೆಲುವು  ಖಚಿತ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ `ಚುನಾವಣಾ ಪೂರ್ವಭಾವಿ ಸಿದ್ದತಾ ಸಭೆ'ಯಲ್ಲಿ ಮಾತನಾಡಿದ ಅವರು, `ಚುನಾವಣೆಯನ್ನು ಗೆಲ್ಲಬೇಕಾದರೆ `ಬೆಳೆಯಬೇಕು-ಬೆಳೆಸಬೇಕು ಜೋಡಿಸಿಕೊಳ್ಳಬೇಕು' ಎಂಬ ರಾಜಕೀಯ ಸೂತ್ರ ಪಾಲಿಸುವುದು ಅನಿವಾರ್ಯ. ಹೀಗಾಗಿ ಮೊದಲು ನಮ್ಮ ಪಕ್ಷಕ್ಕೆ ಮತ ನೀಡುವ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಬೇಕು ಎಂದರು.

ಜಿಪಂ, ತಾಪಂ ಚನಾವಣೆಗಳಲ್ಲಿ ಒಂದೊಂದು ಮತವೂ ಮುಖ್ಯವಾಗಿದ್ದು, ಉಳಿದ ಪಕ್ಷದವರನ್ನು ಸ್ನೇಹದದಿಂದ ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಮತ್ತು ಬಿಜೆಪಿಯ ಜನಪರ ಕೆಲಸಗಳನ್ನು ಮಾಡಬೇಕು, ಪ್ರತಿ ಕ್ಷೇತ್ರದಲ್ಲಿ ಸಭೆ, ಸಮಾರಂಭಗಳನ್ನು ಆಯೋಜಿಸಿ ಜನಾಭಿಪ್ರಾಯ ಸಂಗ್ರಹಿಸಬೇಕು ಹಾಗೂ ಅಭ್ಯರ್ಥಿ ಆಯ್ಕೆ ವೇಳೆ ಮೊದಲ ಆದ್ಯತೆಯನ್ನು ಪಕ್ಷದ ಕಾರ್ಯಕರ್ತರಿಗೆ ನೀಡಬೇಕು ಎಂದು ಹೇಳಿದರು.

ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾತನಾಡುತ್ತಾ, 46 ಸಾವಿರ ಕೋಟಿ ಸಾಲ ಮಾಡುವ ಮೂಲಕ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿರುವ ಸರ್ಕಾರ. ಇಷ್ಟು ಸಾಲ ಮಾಡಿದರೂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಪರಿಹಾರವನ್ನು ನೀಡಿಲ್ಲ. ಹಲವಾರು ಕಡೆ ಸರ್ಕಾರ ನೀಡಿರುವ ಚೆಕ್‍ಗಳು ಬೌನ್ಸ್ ಆಗಿವೆ. ಕೇಂದ್ರದಲ್ಲಿ ಬಿಜೆಪಿಯಿದ್ದು, ಜಿಪಂ ಮತ್ತು ತಾಪಂಗಳಲ್ಲಿ ಬಿಜೆಪಿ ಅಧಿಕಾರ ಪಡೆದರೆ ಕೇಂದ್ರ ಸರ್ಕಾರದ ಅನುದಾನವನ್ನು ಸರಿಯಾಗಿ ಬಳಸಿಕೊಳ್ಳಬಹುದಾಗಿದೆ ಎಂದರು.

ಸಭೆಯಲ್ಲಿ ಶಾಸಕ ಬಿ.ಎನ್.ವಿಜಯಕುಮಾರ್, ಬೆಂಗಳೂರು ನಗರ ಜಿಲ್ಲೆ ಅಧ್ಯಕ್ಷ ಎಸ್. ಮುನಿರಾಜು, ಪಕ್ಷದ ಮುಖಂಡರಾದ ಸುಬ್ಬಣ್ಣ ಸೇರಿದಂತೆ ವಿವಿಧ ಜಿಲ್ಲೆಗಳು ಪದಾಧಿಕಾರಿಗಳು ಭಾಗವಹಿಸಿದ್ದರು. ಅನುಪಸ್ಥಿತಿ:ಭಾರತೀಯ ಜನತಾ ಪಕ್ಷದಿಂದ ಆಯೋಜಿಸಿದ್ದ ಚುನಾವಣಾ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಪಕ್ಷದ ಪ್ರಮುಖ ನಾಯಕರ ಅನುಪಸ್ಥಿತಿ ಎದ್ದುಕಾಣುತ್ತಿತ್ತು. ವಿಜಯಕುಮಾರ್ ಅವರನ್ನು ಹೊರತು ಪಡಿಸಿದ ನಗರದ ಯಾವುದೇ ಶಾಸಕರು ಹಾಗೂ ಸಂಸದರು ಸಭೆಯಲ್ಲಿ ಭಾಗವಹಿಸಿರಲಿಲ್ಲ.

SCROLL FOR NEXT