ಜಿಲ್ಲಾ ಸುದ್ದಿ

ಮಳೆ, ಚರಂಡಿ ನೀರಿಗೆ ಪ್ರತ್ಯೇಕ ಕಾಲುವೆ

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬೊಮ್ಮನಹಳ್ಳಿ ವಲಯದಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಪ್ರತ್ಯೇಕವಾಗಿ ಹರಿಯುವಂತೆ ಕೈಗೆತ್ತಿಕೊಂಡಿರುವ ಮಾದರಿ ಯೋಜನೆಯ ಕಾಮಗಾರಿ 4-5 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಬೊಮ್ಮನಹಳ್ಳಿ ವಲಯದ ದೊಡ್ಡ ಕಮ್ಮನಹಳ್ಳಿ ಮುಖ್ಯ ರಸ್ತೆಯ ನೋಬೊ ನಗರ ಸೇರಿದಂತೆ ಸುತ್ತಮುತ್ತಲ ಅನೇಕ ಬಡಾವಣೆಗಳ ಜನರು ಮಳೆಗಾಲದಲ್ಲಿ ತೀವ್ರ ನರಕಯಾತನೆ ಅನುಭವಿಸುತ್ತಿದ್ದರು. ಮಳೆಗಾಲದಲ್ಲಿ ಗೊಟ್ಟಿಗೆರೆ ಹಾಗೂ ಹುಳಿಮಾವು ಕೆರೆ ನೀರಿನೊಂದಿಗೆ ಚರಂಡಿ ನೀರು ಸೇರಿ, ತಗ್ಗು ಪ್ರದೇಶದ ಮನೆಗಳಿಗೆ ಹರಿಯುತ್ತಿದ್ದು, ಹೀಗಾಗಿ ಜನರು ಸಾಕಷ್ಟು ಸಮಸ್ಯೆಗಳನ್ನುಎದುರಿಸುತ್ತಿದ್ದರು. ಅಲ್ಲದೆ, ಗೊಟ್ಟಿಗೆರೆ, ಹುಳಿಮಾವು ಕೆರೆ ನೀರು ಹಾಗೂ ಚರಂಡಿ ನೀರು ಕೊನೆಗೆ ಮಡಿವಾಳ ಕೆರೆಗೆ ಸೇರುತ್ತಿತ್ತು. ಹೀಗಾಗಿ ಕೆರೆ ನೀರು ಸಂಪೂರ್ಣ ಕಲುಷಿತಗೊಂಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ, ನಗರೋತ್ಥಾನ ಯೋಜನೆ ಅಡಿಯಲ್ಲಿ ಒಟ್ಟು ರು.56 ಕೋಟಿ ವೆಚ್ಚದಲ್ಲಿ ಮಳೆ ನೀರು ಹಾಗೂ ಚರಂಡಿ ನೀರು ಪ್ರತ್ಯೇಕವಾಗಿ ಹರಿಯುವಂತೆ ಯೋಜನೆ ರೂಪಿಸಲಾಗಿತ್ತು. ಅದರಂತೆ ಕಾಮಗಾರಿ ಆರಂಭವಾಗಿದ್ದು, ಶೇ.60ರಷ್ಟು ಮುಕ್ತಾಯಗೊಂಡಿದೆ.

ಕಾಮಗಾರಿ ಸಂಪೂರ್ಣ ಮುಗಿದ ಬಳಿಕ ಈ ಭಾಗದ ಎಲ್ಲ ಕೆರೆಗಳಿಂದ ಮಳೆ ನೀರು ಹರಿದು, ಮಡಿವಾಳ ಕೆರೆ ಸೇರಲಿದೆ. ಒಟ್ಟು 14 ಕಿ.ಮೀ. ಉದ್ದದ ಮಳೆಗಾಲುವೆ ಅಕ್ಕಪಕ್ಕ ಹರಿಯುವ ಚರಂಡಿ ನೀರು ಒಂದು ಕಡೆ ಸೇರಿ, ಶುದ್ಧೀಕರಣಗೊಂಡು ಕೆರೆಗಳಿಗೆ ಬಿಡಲಾಗುವುದು. ಸಿಮೆಂಟ್ ಪೈಪ್ ಅಳವಡಿಕೆ: 4.2 ಮೀ. ಅಗಲ ಹಾಗೂ 2.2 ಮೀ. ಎತ್ತರ ಇರುವ ನೀರುಗಾಲುವೆ ನಿರ್ಮಿಸಲಾಗುತ್ತಿದೆ. ಅಕ್ಕಪಕ್ಕದಲ್ಲಿ ಚರಂಡಿ ನೀರು ಹರಿಯಲು ಸಿಮೆಂಟ್ ಪೈಪ್‍ಗಳನ್ನು ಅಳವಡಿಸಲಾಗುತ್ತಿದೆ ಎಂದು ಮುಖ್ಯ ಎಂಜಿನಿಯರ್ ಅನಂತಸ್ವಾಮಿ ಅವರು ತಿಳಿಸಿದರು.

SCROLL FOR NEXT