ಜಿಲ್ಲಾ ಸುದ್ದಿ

ಸಂದರ್ಭದಂತೆ ಜೀವನ ನಡೆಸಿದೆ: ಡಾ. ಸಿದ್ದಲಿಂಗಯ್ಯ

Manjula VN

ಬೆಂಗಳೂರು: ನನ್ನ ಜೀವನದಲ್ಲಿ ಉದ್ದೇಶ ಪೂರ್ವಕವಾಗಿ ಯಾವುದೇ ಕೆಲಸ ಕೈಗೊಂಡಿಲ್ಲ, ಒಂದು ಚೌಕಟ್ಟಿನೊಳಗೆ, ಆಯಾಯ ಸಂದರ್ಭಕ್ಕೆ ಸರಿ ಅನಿಸಿದ್ದನ್ನು ಮಾಡಿಕೊಂಡು ಬಂದಿದ್ದೇನೆ ಎಂದು ಕವಿ ಹಾಗೂ ಸಾಹಿತಿ ಡಾ. ಸಿದ್ದಲಿಂಗಯ್ಯ ಹೇಳಿದರು.

ಅನಿಕೇತನ ಕನ್ನಡ ಬಳಗ ಹಾಗೂ ವಸಂತ ಪ್ರಕಾಶನ ಹಮ್ಮಕೊಂಡಿದ್ದ ತಮ್ಮ ಜನ ಸಂಸ್ಕೃತಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ವಿಧಾನಪರಿಷತ್ ಸದಸ್ಯನಾದಾಗ ಅಂತರ್ಜಾತಿ ವಿವಾಹ, ಜಾತಿ ಪದ್ಧತಿಗಳಂತಹ ವಿಚಾರಗಳ ಬಗ್ಗೆ ದನಿ ಎತ್ತಿದ್ದೇನೆ. ಅವು ಇನ್ನೊಬ್ಬರಿಗೆ ಸ್ಫೂರ್ತಿಯೂ ಆಗಿವೆ ಎಂದರು.

ನನ್ನ ಜೊತೆ ಸೇರಿದವರನ್ನೆಲ್ಲ ನಾಸ್ತಿಕರೆಂದೇ ಗುರುತಿಸುತ್ತಿದ್ದರು. ನಾನು ನಾಸ್ತಿಕನಾದದ್ದು ಒಂದು ಆಕಸ್ಮಿಕವೇ. ಆದರೆ, ಈಗ ವಯಸ್ಸಾಗಿರುವುದರಿಂದ ಆಸ್ತಿಕನಾಗಲು ಸಾಧ್ಯವಿಲ್ಲ. ಪುಂಡಲೀಕ ಹಾಲಂಬಿ ಅವರ ಬಗ್ಗೆ ನನಗೆ ಅಭಿಮಾನವಿರುವುದರಿಂದ ಈ ಪುಸ್ತಕವನ್ನು ಅವರಿಗೆ ಅರ್ಪಿಸಿದ್ದೇನೆ ಎಂದರು.

ಸಾಹಿತಿ ಡಾ.ಬೈರಮಂಗಲ ರಾಮೇಗೌಡ ಮಾತನಾಡಿ, ಲೇಖಕನಲ್ಲಿ ಹೋರಾಟಗಾರ ಸದಾಕಾಲ ಜೀವಂತವಾಗಿರುತ್ತಾನೆ ಎನ್ನುವುದಕ್ಕೆ ಈ ಪುಸ್ತಕವೇ ಸಾಕ್ಷಿ. ಬ್ರಿಟಿಷರು, ಟಿಪ್ಪುವಿಗೆ ಕನ್ನಡ ಭಾಷೆ ಪರ ಒಲವಿತ್ತು. ಎಂಬುದಕ್ಕೆ ಈ ಪುಸ್ತಕದಲ್ಲಿ 40 ಪತ್ರಗಳ ದಾಖಲೆ ಒದಗಿಸಿದ್ದಾರೆ ಎಂದು ಹೇಳಿದರು.

ಜನ ಸಂಸ್ಕೃತಿ ಪುಸ್ತಕ ಲೋಕಾರ್ಪಣೆ ಮಾಡಿದ ಸಾಹಿತಿ ಡಾ.ಎಚ್.ಎಶ್.ರಾಘವೇಂದ್ರರಾವ್ ಮಾತನಾಡಿ, ನಕ್ಷತ್ರಗಳ ಲೋಕಕ್ಕೆ ಹೋಗಬಯಸಿದ ಹುಡುಗ ಮಣ್ಣಿನ ಕೆಳಗೆ ಮಲಗಿದ್ದಾನೆಂಬುದು ಕ್ರೂರ ವಾಸ್ತವ. ನಾವೆಲ್ಲರೂ ಪರನಿಂದನೆ ಬಿಟ್ಟು ಆತ್ಮ ವಿಮರ್ಶೆ ಮಾಡಿಕೊಂಡರೆ ಉತ್ತಮ ಎಂದರು.

ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ, ವಿಮರ್ಶಕ ಎಚ್.ದಂಡಪ್ಪ, ಅನಿಕೇತನ ಕನ್ನಡ ಬಳಗದ ಅಧ್ಯಕ್ಷ ಮಾಯಣ್ಣ, ವಸಂತ ಪ್ರಕಾಶನದ ಕೆ.ಎಸ್.ಮುರಳಿ ಇದ್ದರು.

SCROLL FOR NEXT