ಜಿಲ್ಲಾ ಸುದ್ದಿ

ಜಿಮ್ ಸಿದ್ಧತೆ: ಸಿಎಂ ಪರಿಶೀಲನೆ

Mainashree

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಫೆಬ್ರವರಿ 3ರಿಂದ 5 ರವರೆಗೆ ನಡೆಯಲಿರುವ ಇನ್ವೆಸ್ಟ್ ಕರ್ನಾಟಕ-2016 ಜಾಗತಿಕ ಹೂಡಿಕೆದಾರರ ಸಮಾವೇಶದ ಸಿದ್ಧತೆ ಕಾರ್ಯಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಖುದ್ದು ಭೇಟಿ ನೀಡಿ ಪರಿಶೀಲಿಸಿದರು.

ಅರಮನೆ ಮೈದಾನದ ಒಳಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ಎಡಭಾಗದಲ್ಲಿ ವಿಚಾರ ಗೋಷ್ಠಿ ನಡೆಸಲು ಪ್ರತ್ಯೇಕ ವಿಭಾಗಗಳನ್ನು ತೆರೆಯಲಾಗಿದೆ. ಎದುರುಗಡೆ ನಿರ್ಮಿಸಿರುವ ಸಭಾಂಗಣದಲ್ಲಿ ವಸ್ತುಪ್ರದರ್ಶನ ನಡೆಯಲಿದೆ. ಅರಮನೆ ಮುಂಭಾಗ ಸ್ಟಾರ್ಟ್ ಅಫ್ ಅಭಿವೃದ್ಧಿ ಬಗ್ಗೆ ಅರಿವು ಮೂಡಿಸಲು ಸೊಗಸಾದ ವೇದಿಕೆ ನಿರ್ಮಿಸಲಾಗಿದೆ. ಇವೆಲ್ಲವನ್ನು ವೀಕ್ಷಿಸಿದ ಮುಖ್ಯಮಂತ್ರಿಗಳು ಫೆಬ್ರವರಿ 3 ರೊಳಗೆ ಎಲ್ಲ ಕೆಲಸ ಮುಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಸಚಿವ  ಆರ್.ವಿ.ದೇಶಪಾಂಡೆ, ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಪ್ರಥಮ ಬಾರಿಗೆ ಜಿಮ್ ನಡೆಸಲಾಯಿತು. ಆಗ ರು.25 ಸಾವಿರ ಕೋಟಿ ನಿರೀಕ್ಷಿಸಿದ್ದೆವು. ರು.18 ಸಾವಿರ ಕೋಟಿ ಹೂಡಿಕೆಯಾಗಿತ್ತು. ಈಗ ನಿರೀಕ್ಷೆ ಹೆಚ್ಚಾಗಿದ್ದು ಅಂದೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಬಂಡವಾಳ ಹೂಡಿಕೆಗೆ ಪ್ರಶಸ್ತ ಸ್ಥಳ, ಇದಕ್ಕೆ ಸ್ಥಳೀಯರ ಸಹಕಾರವು ಅಗತ್ಯವಾಗಿದೆ. ಎಲ್ಲರೂ ಬೆಂಬಲ ನೀಡುವಂತೆ ಮನವಿ ಮಾಡಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ರತ್ನಪ್ರಭ, ಬಿಬಿಎಂಪಿ ಆಯುಕ್ತ ಜಿ.ಕುಮಾರ್ ನಾಯಕ್, ಐಎಎಸ್ ಅಧಿಕಾರಿ ಗೌರವ್ ಗುಪ್ತ, ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಕ್, ಹೆಚ್ಚುವರಿ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಉಪಸ್ಥಿತರಿದ್ದರು.

SCROLL FOR NEXT