ರಬಕವಿ: ಧರ್ಮ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ನಂಬಿದವರು ಸಮಾಜದಲ್ಲಿ ಮಹಾನ್ ಆಗುತ್ತಾರೆ. ಜಗತ್ತನ್ನು ಪ್ರಕಾಶಮಾನವಾಗಿ ಬೆಳಗಿಸಲು ಉತ್ತಮ ಸಂಸ್ಕಾರ ಅವಶ್ಯ ಎಂದು ಹುನ್ನೂರು ಮಧುರಖಂಡಿ ಯ ಬಸವ ಜ್ಞಾನ ಗುರುಕುಲದ ಶರಣ ಈಶ್ವರ ಮಂಟೂರ ಹೇಳಿದರು.
ಬನಹಟ್ಟಿಯ ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಶರಣ ವೀರಪ್ಪ ಕೊಕಟನೂರರ ಜನ್ಮ ಶತಮಾನೋತ್ಸವ ಸಂಭ್ರಮಾಚರಣೆ ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮನೆಯಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ಕಷ್ಟದಲ್ಲಿರುವ ವ್ಯಕ್ತಿಗಳ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿರಬೇಕು. ಕಾಯಕದ ಪೂಜೆಯನ್ನು ನಿರಂತರ ಮಾಡುವುದರಿಂದ ನೀವು ನಿಜವಾದ ಮನುಷ್ಯರಾಗಲು ಸಾಧ್ಯ ಎಂದರು.
ಎಲ್ಲರೂ ಬಾಲ್ಯ ಮತ್ತು ಯೌವ್ವನವನ್ನು ಅನುಭವಿಸಲು ಉತ್ಸುಕರು. ಆದರೆ ವೃದ್ಧಾಪ್ಯ ಯಾರಿಗೂ ಬೇಡವಾಗುತ್ತದೆ. ಶರೀರವನ್ನು ಚನ್ನಾಗಿ ಕಾಯ್ದು ಕೊಂಡು ಸುಂದರ ಜೀವನವನ್ನು ಕಳೆಯಬೇಕು ಎಂದರು.
ತಂದೆ-ತಾಯಿಯರಲ್ಲಿ ನಿಜವಾದ ದೇವನಿದ್ದಾನೆ. ಅಂಥ ದೇವರನ್ನು ಆಧರಿಸುವವನಿಗೆ ಯಾವುದೇ ಸಿದ್ದಿ ಅಥವಾ ಯೋಗದ ಅವಶ್ಯಕತೆ ಇಲ್ಲ. ಬದಲಾಗಿ ಬದುಕಿನುದ್ದಕ್ಕೂ ಹಿರಿಯರ ಆಚಾರ-ವಿಚಾರಗಳನ್ನು ಶ್ರದ್ಧಾ-ಭಕ್ತಿಯಿಂದ ಪಾಲಿಸಿದಲ್ಲಿ ಅದರಲ್ಲೇ ದೈವತ್ವದ ಸಾಕ್ಷಾತ್ಕಾರ ಆಗುತ್ತದೆ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ 80ಸಂವತ್ಸರ ಪೂರೈಸಿದ ಹಿರಿಯ ಜೀವಿಗಳಾದ ಸಿದಮಲ್ಲಪ್ಪ ಬಾವಲತ್ತಿ, ಎಂ.ಎಸ್.ಮುನ್ನೊಳ್ಳಿ, ಕಲ್ಲಯ್ಯಸ್ವಾಮಿ ಹಿರೇಮಠ, ಮಹಾದೇವಪ್ಪ ಪತ್ತಾರ, ಮಲ್ಲಪ್ಪ ಮಧುರಖಂಡಿ, ಸಿದಗಿರೆಪ್ಪ ಬೆಳಗಲಿ, ರಾಮಪ್ಪ ಕಾಮಗೊಂಡ, ಎಂ. ಎಂ. ಹಟ್ಟಿ, ಗಂಗಪ್ಪ ಹೂಗಾರರನ್ನು ಸನ್ಮಾನಿಸಲಾಯಿತು. ಸರಸ್ವತಿ ಸಬರದ ಪ್ರಾರ್ಥಿಸಿದರು. ಪರಶುರಾಮ ಜೋಗಿ ತಬಲಾ ಸಾಥ್ ಮತ್ತು ಪರಶುರಾಮ ತೇಲಿ ಹಾರ್ಮೋನಿಯಂ ಸಾಥ್ ನೀಡಿದರು. ಶತಾಯುಷಿ ವೀರಪ್ಪನವರಿಗೆ ರು. 1 ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಗಂಗಾಧರ ಕೊಕಟನೂರ ಸ್ವಾಗತಿಸಿದರು. ಮಕ್ಕಳ ಸಂಗಮದ ಅಧ್ಯಕ್ಷ ಜಯವಂತ ಕಾಡದೇವರ ಪ್ರಾಸ್ತಾವಿಕ ಮಾತನಾಡಿದರು. ರವಿ ಕಾಮಗೊಂಡ ನಿರೂಪಿಸಿದರು. ಈರಣ್ಣಾ ಬಾಣಕಾರ ವಂದಿಸಿದರು.