ಇಳಕಲ್ಲ: ಮತಕ್ಷೇತ್ರದಲ್ಲಿ ಶಾಸಕರು ಹಾಗೂ ಅವರ ಸಂಬಂಧಿಕರು ತಾಲೂಕಿನಲ್ಲಿ ಕಲ್ಲು, ಮಣ್ಣು ಹಾಗೂ ಮರಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ವಿಜಯಾನಂದ ಕಾಶಪ್ಪನವರ ಅವರು ಬಲಕುಂದಿ ಸರ್ಕಾರಿ ಕೆರೆಯಲ್ಲಿ 4 ನೂರು ಮೀಟರ ಕಲ್ಲು ಅಗೆಯುತ್ತಿದ್ದಾರೆ. ಚಿಕ್ಕಕೊಡಗಲಿ ಗವಿ ಹತ್ತಿರದ ಅರಣ್ಯ ಇಲಾಖೆಯ ಜಾಗೆಯಲ್ಲಿ ಬರುವ ಗ್ರಾನೈಟ ಕಲ್ಲುಗಳನ್ನು ಹಾಡುಹಗಲೆ ಲೂಟಿ ಮಾಡಿ ಸರ್ಕಾರ ಹಾಗೂ ಜನತೆಗೆ ಮೋಸ ಮಾಡಿದ್ದಾರೆ ಎಂದರು.
ಅಲ್ಲದೆ ತಾಲೂಕಿನಲ್ಲಿ ಬರುವ ಹಿರೇಹಳ್ಳದಲ್ಲಿ ಉಪನಾಳ ಗ್ರಾಮದಿಂದ ಇಸ್ಲಾಂಪುರ ವರೆಗಿನ ಹಳ್ಳದಲ್ಲಿಯ ಉಸುಕನ್ನು ತಮ್ಮ ಟಿಪ್ಪರ ಮೂಲಕ ಲೂಟಿ ಮಾಡುತ್ತಿದ್ದಾರೆ. ಅನುಪಕಟ್ಟಿಯ ಗ್ರಾಮದ ಹತ್ತಿರವಿರುವ ಉತ್ತಮ ಗುಣಮಟ್ಟದ ಮಣ್ಣನ್ನು ಶಾಸಕರು ಹಾಗೂ ಅವರ ಸಂಬಂಧಿಕರು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಈ ಎಲ್ಲ ಕಾರ್ಯಗಳು ಶಾಸಕರ ಬೆಂಬಲಿಗರ ನೇತೃತ್ವದಲ್ಲಿ ನಡೆದರೂ ಸರ್ಕಾರಿ ಅಧಿಕಾರಿಗಳು ಅದನ್ನು ತಡೆದಿಲ್ಲ. ಅಧಿಕಾರಿಗಳು ಶಾಸಕರ ಕೈಗೊಂಬೆಯಾಗಿದ್ದಾರೆ. ಶಾಸಕರ ಟಿಪ್ಪರ್ನಲ್ಲಿ ಮರಳು ಸಾಗಿಸಲು ಪೊಲೀಸರು ಹಾಗೂ ಅಧಿಕಾರಿಗಳು ಬೆಂಗಾವಲಾಗಿದ್ದಾರೆ ಎಂದರು.
ತಮ್ಮ ಅವಧಿಯಲ್ಲಿ ತಾಲೂಕಿನಲ್ಲಿ ನೂತನವಾಗಿ 12 ಸೇತುವೆ, ರಸ್ತೆ ಸುಧಾರಣೆ, ಶಾಲಾ ಕಾಲೇಜುಗಳನ್ನು ಪ್ರಾರಂಭಿಸಿದ್ದೇನೆ. ಆದರೆ ಈಗಿನ ಶಾಸಕರು ಯಾವುದೇ ಹೊಸ ಯೋಜನೆ ಮಂಜೂರ ಮಾಡಿಸಿಲ್ಲ. ಆದರೂ ನಾನು ಮಂಜೂರಿ ಮಾಡಿಸಿದ್ದ ಕಾರ್ಯಗಳನ್ನು ತಾವು ಮಾಡಿದ್ದೇವೆ ಎಂದು ಜನತೆಗೆ ಸುಳ್ಳು ಹೇಳುತ್ತಿದ್ದಾರೆ ಎಂದರು.
ಅಧಿಕಾರದಲ್ಲಿ ಇದ್ದಾಗ ಮಂಜೂರಿ ಮಾಡಿಸಿದ್ದ ಮುರೋಳ ಏತ ನೀರಾವರಿ ಯೋಜನೆಯ ಪೂರ್ವ ಭಾಗದ ಯೋಜನೆ ಕಾಮಗಾರಿ ಇನ್ನೂ ತಾಲೂಕಿನಲ್ಲಿ ಪ್ರಾರಂಭವಾಗಿಲ್ಲ. ಆದರೂ ಪಕ್ಕದ ಜಿಲ್ಲೆಗೆ ನೀರು ಕೊಡುವ ಯೋಜನೆ ಕಾಮಗಾರಿ ತಾಲೂಕಿನಲ್ಲಿ ಪ್ರಾರಂಭವಾಗಿದ್ದು ದುರದೃಷ್ಟಕರ. ಶಾಸಕರು ತಾಲೂಕಿನ ರೈತರಿಗೆ ನೀರಾವರಿ ಯೋಜನೆ ಬಗ್ಗೆ ಸುಳ್ಳು ಹೇಳಿ ವಂಚಸಿ ಪಕ್ಕದ ಜಿಲ್ಲೆಗೆ ನೀರು ಕೊಡುವುದು ಯಾವ ನ್ಯಾಯ.
ತಾಲೂಕಿನಲ್ಲಿ ಯಾವುದೇ ಕಾಮಗಾರಿ ಪ್ರಾರಂಭ ಮಾಡಬೇಕಾದರೆ ಶಾಸಕರಿಗೆ ಶೇಕಡಾವಾರು ಕೊಟ್ಟರೆ ಮಾತ್ರ ಕಾಮಗಾರಿಗೆ ಚಾಲನೆ ಸಿಗುತ್ತದೆ. ಇನ್ನೂ ಟೆಂಡರ್ ಹಾಕಿದ ಅನೇಕ ಗುತ್ತಿಗೆದಾರರಿಗೆ ಕಾಮಗಾರಿ ಮಾಡಬೇಡ ಎಂದು ಶಾಸಕರು ಬೆದರಿಸಿ ಕಳಿಸಿದ್ದಾರೆ ಎಂದು ಆರೋಪಿಸಿದರು.
ಮೋಹನ ಹೊಸಮನಿ, ದಿಲೀಪ ದೇವಗಿರಕರ, ಆದಪ್ಪ ಮೇರನಾಳ, ಧನಂಜಯಕುಮಾರ ದೇಸಾಯಿ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.