ಅಮೀನಗಡ: ಅಮೀನಗಡ ಹೋಬಳಿ ಮಟ್ಟದ ಚಿಕನಾಳ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಸೋಮವಾರ ಜರುಗಿತು.
ತಾಲೂಕು ನೋಡಲ್ ಅಧಿಕಾರಿಯಾಗಿ ಹುನಗುಂದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಅರವಿಂದ ಜಮಖಂಡಿ, ಚಿಕನಾಳ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್.ಎಂ. ಬೋರೆಡ್ಡಿ, ಕಾರ್ಯದರ್ಶಿ ಆರ್.ಎಸ್. ಮುದಗಲ್, ಗ್ರಾಮ ಲೆಕ್ಕಾಧಿಕಾರಿ ರೋಣದ, ಪಶು ಸಂಗೋಪನಾ ಅಧಿಕಾರಿ ನ್ಯಾಮಗೌಡರ ಉಪಸ್ಥಿತರಿದ್ದರು.
ಗ್ರಾಮದ ಕೆರೆಗೆ ಹೋಗುವ ರಸ್ತೆ ಅತಿಕ್ರಮಣ, ಚಿಕನಾಳ ಗ್ರಾಮದಿಂದ ಮುಖ್ಯ ರಸ್ತೆವರೆಗೆ ರಸ್ತೆ ಡಾಂಬರೀಕರಣ, ಗ್ರಾಮದ ಸ್ಮಶಾನ ಸ್ವಚ್ಛತೆ ಹಾಗೂ ಕಾಂಪೌಡ್ ನಿರ್ಮಾಣ, ಗ್ರಾಮಕ್ಕೆ ಸುವರ್ಣ ಗ್ರಾಮ ಯೋಜನೆ, ಮಹಿಳಾ ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ಅತಿಕ್ರಮಣ ಜಾಗ ಒತ್ತುವರಿ, ಗ್ರಾಮದ ಸಾರ್ವಜನಿಕ ಗ್ರಂಥಾಲಯ ಅಭಿವೃದ್ಧಿ, ಪ್ರೌಢಶಾಲೆ ಮಂಜೂರು, ಅಂಗನವಾಡಿ ಕಟ್ಟಡ ನಿರ್ಮಾಣ, ಚಿಕನಾಳ ಹಾಗೂ ಉಪನಾಳ ಗ್ರಾಮದ ರಸ್ತೆ ದುರಸ್ತಿ, ರೈತ ವರ್ಗಕ್ಕೆ ಗಂಗಾ ಕಲ್ಯಾಣ ಯೋಜನೆ ಮಂಜೂರು, ಬಸವ ವಸತಿ ಯೋಜನೆಯಡಿ ಮನೆಗಳು ನಿರ್ಮಾಣ, ಮಲಪ್ರಭಾ ನದಿ ನೀರು ಪೂರೈಕೆ ಮುಂತಾದ 40ಕ್ಕೂ ಹೆಚ್ಚು ಸಮಸ್ಯೆ, ಬೇಡಿಕೆಗಳ ಮನವಿಯನ್ನು ಗ್ರಾಮದ ಹಿರಿಯರಾದ ಟಿ.ಎಂ. ತಿಪ್ಪಣ್ಣವರ್ ಅಧಿಕಾರಿಗಳಿಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿದ ತಾಲೂಕು ನೋಡಲ್ ಅಧಿಕಾರಿ ಅರವಿಂದ ಜಮಖಂಡಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ತಲುಪಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಗ್ರಾಮಸ್ಥರಾದ ಎಸ್.ಎಂ. ಹಾದಿ, ಷಣ್ಮುಖಪ್ಪ ಮ್ಯಾದರ,ದ್ವಾವಪ್ಪ ಜಿಡಿ, ಶರಣಪ್ಪ ಮೊಕಾಶಿ, ರಾಮಣ್ಣ ಪಿಡ್ರಾವತಾರ ಇದ್ದರು.