ಬಾಗಲಕೋಟೆ: ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪ್ರಸಕ್ತ ಮುಂಗಾರು ಹಂಗಾಮು ಆಶಾದಾಯಕವಾಗಿದ್ದು, ಜಿಲ್ಲೆ ತುಂಬೆಲ್ಲ ಉತ್ತಮ ಮಳೆಯಾಗಿರುತ್ತದೆ. ಇದರಿಂದ ಮುಂಚಿತವಾಗಿ ಬಿತ್ತನೆ ಆಗಬೇಕಾದ ಹೆಸರು, ತೊಗರಿ, ಸಜ್ಜೆ, ಸೋಯಾ ಅವರೆ ಬೆಳೆಗಳ ಬಿತ್ತನೆಗೆ ವಾತಾವರಣ ಅನುಕೂಲಕರವಾಗಿದ್ದು, ಜಿಲ್ಲೆಯ ರೈತ ಬಾಂಧವರು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳಾದ ಸಜ್ಜೆ, ಹೆಸರು, ಸೋಯಾ ಅವರೆ ಮಕ್ಕೆಜೋಳೆ, ಸೂರ್ಯಕಾಂತಿ, ತೊಗರಿ ಬೆಳೆಗಳ ಬಿತ್ತನೆ ಬೀಜಗಳನ್ನು ಮುಂಗಡವಾಗಿ ದಾಸ್ತಾನೀಕರಿಸಲಾಗುತ್ತಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಾಸ್ತಾನು ಸಮರ್ಪಕವಾಗಿರುತ್ತದೆ. ಬಿತ್ತನೆ ಬೀಜವನ್ನು ಎಲ್ಲಾ ವರ್ಗದ ರೈತರಿಗೆ ಗರಿಷ್ಠ 5 ಎಕರೆ ಅಥವಾ ಅವರ ಹಿಡುವಳಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಸೀಮಿತಗೊಳಿಸಿ ವಿತರಿಸಲಾಗುವುದು. ಬೆಳೆಗಳವಾರು ನಿಗದಿಪಡಿಸಿದ ಸಹಾಯಧನ ಈ ಕೆಳಕಂಡಂತೆ ಇರುತ್ತದೆ. (ರು. ಪ್ರತಿ ಕೆ.ಜಿ.ಗೆ) ಜೋಳ- ್ 24.00, ಮುಸುಕಿನ ಜೋಳ- ರು. 35.00, ಸಜ್ಜೆ- ರು. 25.00, ಹೆಸರು- 24.00, ತೊಗರಿ- ರು. 25.00, ಸೋಯಾ ಅವರೆ- ರು. 20.00, ಸೂರ್ಯಕಾಂತಿ- ರು. 80.00, ಶೇಂಗಾ- ರು. 15.00.
ಜಿಲ್ಲೆಯ ಎಲ್ಲ ರೈತರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ. ಇದಲ್ಲದೇ ರೈತ ಸಂಪರ್ಕ ಕೇಂದ್ರದಲ್ಲಿ ಬೀಜೋಪಚಾರ ಔಷಧಿ, ಜೈವಿಕ ಗೊಬ್ಬರ ಶೇ. 50 ರಿಯಾಯಿತಿಯಲ್ಲಿ ಲಭ್ಯವಿದ್ದು, ಹೆಚ್ಚುವರಿ ಉತ್ಪಾದನೆಗಾಗಿ ಎಲ್ಲಾ ರೈತರು ಬೀಜೋಪಚಾರ ಕೈಗೊಂಡು ಬಿತ್ತನೆ ಮಾಡುವಂತೆ ಕೃಷಿ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.