ಜಮಖಂಡಿ: ದಲಿತರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಂಘಟಿತರಾಗಿ ಹೋರಾಟ ಮಾಡಲು ಡಾ. ಬಿ.ಆರ್.ಅಂಬೇಡ್ಕರರು ನೀಡಿದ ಕರೆಯಂತೆ ನಾವೂ ಸಮಾಜದಲ್ಲಿ ಮುನ್ನುಗ್ಗಬೇಕು ಎಂದು ಶಾಸಕ ಸಿದ್ದು ನ್ಯಾಮಗೌಡ ಕರೆ ನೀಡಿದರು.
ಅವರು ತಾಲೂಕಿನ ಸಾವಳಗಿ ಗ್ರಾಮದಲ್ಲಿ ಮಂಗಳವಾರ ಅಂಬೇಡ್ಕರ್ ಯುವಕ ಮಂಡಳಿ, ಎಸ್ಸಿ-ಎಸ್ಟಿ ನೌಕರರ ಸಂಘ ಮತ್ತು ಬಸವೇಶ್ವರ ಯುವಕ ಮಂಡಳ ಇವುಗಳ ಆಶ್ರಯದಲ್ಲಿ ನಡೆದ ಡಾ. ಬಿ.ಆರ್.ಅಂಬೇಡ್ಕರರ 123ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ದಲಿತ ಜನಾಂಗಕ್ಕಾಗಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ಶೇ. 18ರಷ್ಟು ಮೀಸಲಾತಿಯಿಂದಾಗಿ ಎಲ್ಲ ದಲಿತ ವರ್ಗದ ಜನ ವಿದ್ಯಾವಂತರಾಗಿ ತಮ್ಮ ಜೀವನ ಉಜ್ವಲ ಮಾಡಿಕೊಳ್ಳಬೇಕು. ಮಾನವ ಕುಲ ಉದ್ಧರಿಸಿದ ಇತಿಹಾಸ ಪುರುಷರು ಕೇವಲ ಜಾತಿ-ಧರ್ಮಕ್ಕೆ ಸೀಮಿತರಲ್ಲ. ಅಂಬೇಡ್ಕರ್, ಬಸವಣ್ಣ ಎಲ್ಲ ಜಾತಿಗೂ ಸಂಬಂಧವುಳ್ಳವರು. ನಮ್ಮ ಬದುಕಿಗೆ ದಾರಿ ತೋರಿದ ಇತಿಹಾಸ ಪುರುಷರ ಬಗ್ಗೆ ಚಿಂತನ- ಮಂಥನ ನಡೆಸಬೇಕು ಎಂದರು.
ಸಮಾಜದ ಎಲ್ಲ ಜನಾಂಗದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರೊಂದಿಗೆ ಅನ್ಯೋನ್ಯ ಬಾಳ್ವೆ ನಡೆಸಬೇಕು. ಬಸವಣ್ಣ ನವರು ಸಮಾಜ ಸುಧಾರಣೆ ಮತ್ತು ಸಮಾಜ ಜಾಗೃತಿಗೆ ಹಾಕಿಕೊಟ್ಟ ಸನ್ಮಾರ್ಗದಲ್ಲೇ ಡಾ. ಬಿ.ಆರ್. ಅಂಬೇಡ್ಕರರು ಸಂವಿಧಾನದಲ್ಲಿ ಪ್ರತಿಪಾದಿಸಿ ಇಡಿ ಜಗತ್ತಿಗೆ ಆದರ್ಶಪ್ರಾಯರಾದರು. ಅವರ ತತ್ವ-ಸಿದ್ಧಾಂತ- ಆದರ್ಶಗಳನ್ನು ನಾವೆಲ್ಲರೂ ಪಾಲಿಸಿ ಜೀವನ ಮಟ್ಟ ಮೇಲೆರಿಸಿಕೊಳ್ಳಬೇಕು. ದಲಿತ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಿ ಅವರನ್ನು ಈ ನಾಡಿನಲ್ಲಿ ಉತ್ತಮ ಪ್ರಜೆಗಳನ್ನಾಗಿಸಿ ಮಾಡಬೇಕು. ದಲಿತರಲ್ಲಿ ಜಾಗೃತಿ ಮೂಡಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಚಿಕ್ಕೋಡಿ ಕಸಾಪ ನಿಕಟಪೂರ್ವ ಅಧ್ಯಕ್ಷ ಸುಬ್ಬರಾವ ಎಂಟೆತ್ತನವರ, ಪ್ರೊ. ಸಿ.ಪಿ. ಸಿಂಪಗೇರ, ಬಸವರಾಜ ಜಾಲವಾದಿ ಉಪನ್ಯಾಸ ನೀಡಿದರು. ಜಿಪಂ ಮಾಜಿ ಸುಶೀಲಕುಮಾರ ಬೆಳಗಲಿ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಡಿವೈಎಸ್ಪಿ ಜಿ.ಎಂ. ದೇಸೂರ, ಸತಗೌಡ ನ್ಯಾಮಗೌಡ, ಪರಶುರಾಮ ಕಾಂಬಳೆ, ಗ್ರಾಪಂ ಅಧ್ಯಕ್ಷೆ ಸವಿತಾ ತಳಕೇರಿ, ಡಾ. ಎಸ್.ಎಸ್. ಬಿರಾದಾರ, ಪಿಎಸ್ಐ ಚಂದ್ರಶೇಖರ ಮಠಪತಿ,ಬಸವರಾಜ ಹೊನವಾಡ, ವಿಠಲ್ ಉಮರಾಣಿ, ಬಸುಗೌಡ ಪರಮಗೊಂಡ, ರಾಮು ಬಂಡಿವಡ್ಡರ್, ಅಪ್ಪುಗೌಡ ಪಾಟೀಲ್, ಶೋಭಾ ಮಾದರ, ಪಾರ್ಶನಾಥ ಉಪಾಧ್ಯೆ, ರವಿ ಬಬಲೇಶ್ವರ, ಅನಿಲ್ ಬಡಿಗೇರ, ಬಸು ಕೊಪ್ಪ ವೇದಿಕೆಯಲ್ಲಿದ್ದರು. ಪಲ್ಲವಿ ತಳಕೇರಿ ಪ್ರಾರ್ಥಿಸಿದರು. ವೈ.ಪಿ. ಹೊನವಾಡ ಸ್ವಾಗತಿಸಿದರು. ರಾಜೂ ಮೇಲಿನಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರವಿಂದ ಸಾವಳಗಿ ನಿರೂಪಿಸಿದರು. ಉಮೇಶ ವಂದಿಸಿದರು.