ಜಿ.ವರ್ಗದಡಿ ಅಕ್ರಮ ನಿವೇಶನ: ಜಿಲ್ಲಾ ಬಿಜೆಪಿ ಆರೋಪ
ಚಾಮರಾಜನಗರ: ಅಧಿಕಾರ ದುರುಪಯೋಗಪಡಿಸಿಕೊಂಡು 1998ರಲ್ಲಿ ನಗರದ ಕೆಎಚ್ಬಿ ಬಡಾವಣೆಯಲ್ಲಿ ಅಕ್ರಮವಾಗಿ ನಿವೇಶನ ಪಡೆದ ಸಂಬಂಧ ಈಗ ತನಿಖೆಗೆ ನ್ಯಾಯಾಲಯದ ಆದೇಶವಾಗಿರುವುದರಿಂದ ಸಚಿವ ಎಚ್.ಎಸ್. ಮಹದೇವಪ್ರಸಾದ್ ರಾಜಿನಾಮೆ ನೀಡಬೇಕೆಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ನಿರಂಜನಕುಮಾರ್ ಆಗ್ರಹಿಸಿದರು.
ನನಗೆ ರಾಜ್ಯದಲ್ಲಿ ಎಲ್ಲೂ ನಿವೇಶನ ಇಲ್ಲ ಎಂದು ಸುಳ್ಳು ಅಫಿಡವಿಟ್ ಸಲ್ಲಿಸಿ, ಶಾಸಕತನ ದುರುಪಯೋಗಪಡಿಸಿಕೊಂಡು ನಿಗದಿಯಾಗಿದ್ದ ದರಕ್ಕಿಂತ ಕಡಿಮೆ ದರದಲ್ಲಿ ಮಧ್ಯಮವರ್ಗಕ್ಕೆ ಸೇರಬೇಕಾದ ನಿವೇಶನವನ್ನು 1998ರಲ್ಲಿ ಪಡೆದಿದ್ದಾರೆ. ಇದರ ಬಗ್ಗೆ ಹಿರಿಬೇಗೂರು ನಂದೀಶ್ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದು, ಇದೀಗ ನ್ಯಾಯಾಲಯ ತನಿಖೆಗೆ ಆದೇಶಿದೆಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೂರು ಸ್ವೀಕರಿಸಿದ್ದ ಲೋಕಾಯುಕ್ತರು ಇದರ ಬಗ್ಗೆ ತನಿಖೆ ನಡೆಸಿ, ವರದಿ ನೀಡುವಂತೆ ಲೋಕಾಯುಕ್ತ ಎಸ್ಪಿ ಜಗದೀಶ್ ಪ್ರಸಾದ್ ಅವರಿಗೆ ಸೂಚಿಸಿದ್ದರು, ಸಚಿವರ ಒತ್ತಡದಿಂದಾಗಿ ಎಸ್ಪಿ ತನಿಖೆ ಮಾಡದೇ 6 ತಿಂಗಳ ಕಾಲ ವಿಳಂಬ ಮಾಡಿದರು. ಮತ್ತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದರನ್ವಯ ಜಿಲ್ಲಾ ನ್ಯಾಯಾಲಯ ಮತ್ತೆ ಎಫ್ಐಆರ್ ದಾಖಲು ಮಾಡಿ ವರದಿ ಸಲ್ಲಿಸಲು ಸೂಚಿಸಿ, ಹೈಕೋರ್ಟ್ನಲ್ಲಿ ಅರ್ಜಿ ಇರುವುದರಿಂದ ಆದರ ಆದೇಶ ಬರುವವರೆಗೆ ತಡೆಹಿಡಿಯಲು ಆದೇಶಿಸಿತ್ತು. ಈ ಅದೇಶವನ್ನು ಪ್ರಶ್ನಿಸಿ ದೂರುದಾರ ನಂದೀಶ್ ಹೈಕೋರ್ಟ್ ಮೊರೆ ಹೋದರು, ಈಗ ಹೈಕೋರ್ಟ್ ಲೋಕಾಯುಕ್ತ ಎಸ್ಪಿ ಅವರಿಗೆ ತ್ವರಿತವಾಗಿ ಪ್ರಕರಣ ತನಿಖೆ ಮುಗಿಸಲು ಆದೇಶ ನೀಡಿರುವುದರಿಂದ, ಸಚಿವರು ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಬೇಕು, ಇಲ್ಲದಿದ್ದರೆ ಪ್ರಭಾವ ಬಳಸಿ ತನಿಖೆಯನ್ನು ದಿಕ್ಕು ತಪ್ಪಿಸುತ್ತಾರೆ ಎಂದು ಆರೋಪಿಸಿದರು. ನಿವೇಶನ ವಾಪಸ್: ಬೆಂಗಳೂರಿನ ಬಿಟಿಎಂ 4ನೇ ಹಂತ 2ನೇ ಬ್ಲಾಕ್ನಲ್ಲಿ ಜಿ.ವರ್ಗದಲ್ಲಿ ತಮ್ಮ ಮಗ ಗಣೇಶ್ಪ್ರಸಾದ್ ಹೆಸರಿನಲ್ಲಿ 2007ರಲ್ಲಿ 40್ಢ60 ಅಡಿ ನಿವೇಶನ ಪಡೆದಿದ್ದಾರೆ. ಜಿ.ವರ್ಗ ನಿವೇಶನವಿರುವುದು ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ, ಆದರೆ, ಸಚಿವರ ಮಗ ಯಾವ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.ಸಚಿವರ ಅಕ್ರಮ ಆಸ್ತಿಗಳ ಬಗ್ಗೆ ದೂರುದಾರ ನಂದೀಶ್ ಲೋಕಾಯುಕ್ತರಿಗೆ ದಾಖಲೆಗಳನ್ನು ನೀಡಿರುವುದರಿಂದ ಹೆದರಿದ ಮಹದೇವಪ್ರಸಾದ್ ಸುಮಾರು 4 ಕೋಟಿ ಬೆಳೆಬಾಳುವ ಬಿಟಿಎಂ 4ನೇ ಹಂತ 2ನೇ ಬ್ಲಾಕ್ನ ನಿವೇಶನವನ್ನು 2014 ಜ. 9ರಂದು ಸರ್ಕಾರಕ್ಕೆ ವಾಪಸ್ ಕೊಟ್ಟಿದ್ದಾರೆ ಇದರಲ್ಲೇ ಗೊತ್ತಾಗುತ್ತದೆ ಸಚಿವರ ಸಾಚಾತನ ಎಂದರು.ಪುರಸಭೆ ಮಾಜಿ ಅಧ್ಯಕ್ಷ ಸುರೇಶ್, ಗ್ರಾಪಂ ಅಧ್ಯಕ್ಷ ಪ್ರಕಾಶ್, ರ.ನಾರಾಯಣಗೌಡ ಇದ್ದರು.