ಲಿಂಗಸ್ಗೂರು: ಆಲಮಟ್ಟಿ ಜಲಾಶಯದಲ್ಲಿ ನಿರ್ಮಿಸಿದ ಉದ್ಯಾನವನ ಮಾದರಿಯಂತೆ ಬಸವಸಾಗರ ಜಲಾಶಯದ ಅಣೆಕಟ್ಟು ಮುಂಭಾಗದಲ್ಲಿ ನಿರ್ಮಿಸಲು ಮುಂದಾದ ಉದ್ದೇಶಿತ ಉದ್ಯಾನವನ ಕಾಮಗಾರಿ ಹಣದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.
ಪುಣ್ಯಕ್ಷೇತ್ರ, ಪ್ರಾಚೀನ ಸ್ಮಾರಕ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರಿಗಾಗಿ ಉದ್ಯಾನವನ ನಿರ್ಮಿಸಿದರೆ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ. ಆಲಮಟ್ಟಿ ಜಲಾಶಯದಲ್ಲಿ ಉದ್ಯಾನವನ ನಿರ್ಮಿಸಿದಾಗಿನಿಂದ ಜಲಾಶಯದ ಜೊತೆಗೆ ಅದರಲ್ಲೂ ಉದ್ಯಾನವನ ವೀಕ್ಷಿಸಲೆಂದೇ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಿದ್ದಾರೆ. ಅದೇ ರೀತಿ ಬಸವಸಾಗರ ಜಲಾಶಯ ಪ್ರದೇಶದಲ್ಲಿ ಆಲಮಟ್ಟಿ ಜಲಾಶಯ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲು ಪ್ರವಾಸೋದ್ಯಮ ಇಲಾಖೆಯಿಂದ 86,30,584 ನಿಗದಿಪಡಿಸಿ ಬೀದರ್ನ ಬಿರಾದಾರ ಕನ್ಸ್ಸ್ಟ್ರಕ್ಷನ್ ಕಂಪನಿಗೆ 2010 ಏಪ್ರಿಲ್ 9ರಂದು ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಕಾಮಗಾರಿ ಅರ್ಧಕ್ಕೆ: ಉದ್ಯಾನವನ ನಿರ್ಮಿಸಲು ಗುತ್ತಿಗೆ ಪಡೆದ ಗುತ್ತಿಗೆದಾರರು ಹಾಗೂ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮಾಡಿಕೊಂಡ ಒಪ್ಪಂದದಂತೆ ಪಾಥ್ ವೇ ಮತ್ತು ಕರ್ಬ್ಸ್, ಲ್ಯಾಂಡ್ ಸ್ಕೇಪ್, ಗಾರ್ಡನ್ ಲೈಟಿಂಗ್, ರಿಕ್ರಿಯೇಷನ್, ಸನ್ ಶೇಡ್ಸ್, ಫೆನ್ಸಿಂಗ್, ಸಿವಿಲ್ ವರ್ಕ್ಸ್, ನೀರು ಸರಬರಾಜು, ವಿದ್ಯುತ್ ಸಂಪರ್ಕ, ಬೋರ್ವೆಲ್, ಶೌಚಾಲಯ, ಪಾರ್ಕಿಂಗ್, ಸೈನೇಜ್ ಸೇರಿದಂತೆ ಇನ್ನಿತರೆ ಕಾಮಗಾರಿ ಕೈಗೊಳ್ಳದೆ ಕೇವಲ ವಿವಿಧ ನಮೂನೆಯ ಆಕರ್ಷಕ ಹೂವಿನ ಗಿಡಗಳು, 5-6 ಆಸನ ಅಳವಡಿಸಿ ನಾಲ್ಕು ವರ್ಷದಿಂದ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಗಿದೆ.
ಹಿಂದೇಟು: ಬಸವಸಾಗರ ಜಲಾಶಯ ಭರ್ತಿಯಾದ ವೇಳೆ ಕ್ರಸ್ಟ್ ಗೇಟುಗಳ ಮೂಲಕ ಕೃಷ್ಣಾ ನದಿಗೆ ನೀರು ಹರಿಬಿಟ್ಟಾಗ ನಯನಮನೋಹರ ದೃಶ್ಯ ಕಂಡು ಬರುತ್ತದೆ. ಆ ದೃಶ್ಯವನ್ನು ವೀಕ್ಷಿಸಿ ಆನಂದಿಸಲು ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಆದರೆ ಬೇರೆ ಬೇರೆ ಕಡೆಗಳಿಂದ ಆಗಮಿಸಿದ ಪ್ರವಾಸಿಗರಿಗೆ ವಿಶ್ರಾಂತಿ ಪಡೆಯಲು ಅಥವಾ ಲಘು ಆಹಾರ ಸೇವಿಸಲು ವ್ಯವಸ್ಥಿತ ಉದ್ಯಾನವನ ಇಲ್ಲದ ಕಾರಣ ಜಲಾಶಯ ವೀಕ್ಷಣೆಗೆ ಹಿಂದೇಟು ಹಾಕುತ್ತಿದ್ದಾರೆ. ಇದನ್ನು ಮನಗಂಡು ಅಧಿಕಾರಿಗಳು ಅರ್ಧಕ್ಕೆ ನಿಂತಿರುವ ಉದ್ಯಾನವನ ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವತ್ತ ಗಮನ ಹರಿಸಬೇಕಿದೆ.
ಉದ್ಯಾನವನ ಅಭಿವೃದ್ಧಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಉದ್ಯಾನವನ ಅಭಿವೃದ್ಧಿಪಡಿಸಲು ಸೂಚನೆ ನೀಡಲಾಗುವುದೆಂದು ಜಲಾಶಯದ ಕಾರ್ಯನಿರ್ವಾಹಕ ಅಭಿಯಂತರ ಎಂ. ರಂಗರಾಮ್ ಸ್ಪಷ್ಟಪಡಿಸಿದ್ದಾರೆ.