ಹರಿಹರಪುರ: 2019 ರ ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಮತದಾನದ ಜಾಗೃತಿ ಜೋರಾಗಿಯೇ ಇದ್ದು, ಲೌಕಿಕ ವಿಷಯಗಳಿಂದ ಸಾಮಾನ್ಯವಾಗಿ ಅಂತರ ಕಾಯ್ದುಕೊಳ್ಳುವ ಸಾಧು, ಸಂತರೂ ಸಹ ಮತದಾನ ಮಾಡಿದ್ದಾರೆ.
ಕರ್ನಾಟಕವೂ ಸೇರಿ ಒಟ್ಟಾರೆ ದೇಶದ 11 ರಾಜ್ಯಗಳಲ್ಲಿ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರದಲ್ಲಿರುವ ಶಂಕರಾಚಾರ್ಯ ಶಾರದಾ ಲಕ್ಷ್ಮೀ ನೃಸಿಂಹ ಮಠದ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮಿಗಳು ಮತದಾನ ಮಾಡಿದ್ದಾರೆ.
ಮತದಾನಕ್ಕೂ ಮುನ್ನ ಜಾಗೃತಿ ಮೂಡಿಸುವುದಕ್ಕೂ ಹರಿಹರ ಪುರದ ಮಠ ಕೈ ಜೋಡಿಸಿತ್ತು. ಚುನಾವಣೆ ಸಂದರ್ಭದಲ್ಲಿ ಸಾಲು ಸಾಲು ರಜೆ ಇರುವ ಹಿನ್ನೆಲೆಯಲ್ಲಿ ಹರಿಹರಪುರದ ಶ್ರೀಕ್ಷೇತ್ರಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಕಟಣೆ ಬಿಡುಗಡೆ ಮಾಡಿದ್ದ ಮಠ, ಮತದಾನ ಮಾಡಿಯೇ ಕ್ಷೇತ್ರಕ್ಕೆ ಭೇಟಿ ನೀಡಬೇಕೆಂದು ಭಕ್ತಾದಿಗಳಿಗೆ ಕರೆ ನೀಡಿತ್ತು. ಈಗ ಸ್ವತಃ ಸ್ವಾಮಿಗಳು ತಾವೇ ಮೊದಲು ಮತದಾನ ಮಾಡುವ ಮೂಲಕ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಮಾದರಿಯಾಗಿದ್ದಾರೆ.