ಕೊಚ್ಚಿ: ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಅವರ ವಿರುದ್ಧ ಮೂವರು ಸುಮಲತಾ ಎಂಬ ಹೆಸರಿನ ಮಹಿಳೆಯರು ಸ್ಪರ್ಧಿಸಿ ಗೊಂದಲ ಮೂಡಿಸಿದ್ದರು. ಇದೀಗ ಇಂತಹುದೇ ಗೊಂದಲ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೂ ಎದುರಾಗಿದ್ದು, ವಯನಾಡಿನಲ್ಲಿ ರಾಹುಲ್ ಗಾಂಧಿ ಹೆಸರಿನ ಮತ್ತೆ ಇಬ್ಬರು ವ್ಯಕ್ತಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಅಮೇಥಿ ಜತೆಗೆ ಕೇರಳದ ವಯನಾಡಿನಿಂದಲೂ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಂಕಷ್ಟಗಳಿಗೆ ಕೊನೆಮೊದಲಿಲ್ಲದಂತಾಗಿದೆ. ಒಂದೆಡೆ ಬಿಜೆಪಿ ವಯನಾಡಿನಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದೆ. ಇನ್ನೊಂದೆಡೆ ಸೌರ ಹಗರಣದ ಪ್ರಮುಖ ಆರೋಪಿ ಸರಿತಾ ಎಸ್ ನಾಯರ್ ಪೈಪೋಟಿಯೊಡ್ಡಲು ಮುಂದಾಗಿದ್ದಾರೆ. ಇದೆಲ್ಲದರ ಮಧ್ಯೆ ರಾಹುಲ್ ಗಾಂಧಿ ಹೆಸರಿನ ಮತ್ತಿಬ್ಬರು ವ್ಯಕ್ತಿಗಳ ಸ್ಪರ್ಧೆಯನ್ನೂ ಕಾಂಗ್ರೆಸ್ ಅಧ್ಯಕ್ಷ ಎದುರಿಸಬೇಕಾಗಿ ಬಂದಿದೆ.
ಹೌದು.. ಈ ಹಿಂದೆ ಮಂಡ್ಯದಲ್ಲಿ ಇಂತಹ ಗೊಂದಲ ಎದುರಾಗಿತ್ತು. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಅವರ ವಿರುದ್ಧ ಅದೇ ಹೆಸರಿನ ಮೂವರು ಮಹಿಳೆಯರು ನಾಮಪತ್ರ ಸಲ್ಲಿಕೆ ಮಾಡಿ ಗೊಂದಲಕ್ಕೆ ಕಾರಣರಾಗಿದ್ದರು. ಇದು ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಇದೀಗ ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ಇದೇ ಧರ್ಮ ಸಂಕಟ ಎದುರಾಗಿದ್ದು, ವಯನಾಡಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಲ್ಲದೇ ಮತ್ತಿಬ್ಬರು ರಾಹುಲ್ ಗಾಂಧಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡಿನಿಂದ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ ಇನ್ನಿಬ್ಬರು ರಾಹುಲ್ ಗಾಂಧಿಗಳು ಕೂಡ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಅದರಂತೆ ಅವರು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಗುರುವಾರ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕೇರಳ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಎರುಮೆಲೆ ನಿವಾಸಿ ರಾಹುಲ್ ಗಾಂಧಿ ಕೆ.ಇ. ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂತೆಯೇ ಅಖಿಲ ಭಾರತ ಮಕ್ಕಳ್ ಕಚ್ಚಿಯ ರಾಹುಲ್ ಗಾಂಧಿ ಕೆ. ಎಂಬುವವರೂ ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ. ಇವರನ್ನು ಹೊರತು ಪಡಿಸಿ ಕೆ.ಎಂ. ಶಿವಪ್ರಸಾದ್ ಗಾಂಧಿ ಎಂಬುವವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅಂತಿಮವಾಗಿ ವಯನಾಡು ಲೋಕಸಭೆ ಕ್ಷೇತ್ರದಲ್ಲಿ 25 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos