ನಕ್ಸಲ್ಬಾರಿ: ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಬಚಾವೋ, ಬೇಟಿ ಪಢಾವೋ ಯೋಜನೆ ಸಂಪೂರ್ಣ ವಿಫಲವಾಗಿದೆ. ಆದರೆ ಹೆಣ್ಣುಮಕ್ಕಳ ಅಭ್ಯುದಯಕ್ಕಾಗಿ ಟಿಎಂಸಿ ಸರ್ಕಾರ ಜಾರಿಗೆ ತಂದ ಕನ್ಯಾಶ್ರೀ ಯೋಜನೆ ಯಶಸ್ವಿಯಾಗಿದೆ ಮತ್ತು ವಿಶ್ವಸಂಸ್ಥೆಯ ಪ್ರಶಸ್ತಿಗೂ ಪಾತ್ರವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಲೋಕಸಭಾ ಕ್ಷೇತ್ರದ ನಕ್ಸಲ್ ಬಾರಿಯಲ್ಲಿ ಚುನಾವಣಾ ರ್ಯಾರಿ ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಅಭ್ಯುದಯಕ್ಕಾಗಿ 2012ರಲ್ಲೇ ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕನ್ಯಾಶ್ರೀ ಯೋಜನೆಗೆ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ಪ್ರಶಸ್ತಿ ಸಂದಿದೆ ಎಂದರು.
ಮೋದಿ ಅವರ ಬೇಟಿ ಬಚಾವೋ ಯೋಜನೆಯಿಂದ ಯಾವುದೇ ಹೆಣ್ಣುಮಕ್ಕಳಿಗೂ ಸಹಾಯವಾಗಿಲ್ಲ. ಅದು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ಅಲ್ಲದೆ ರಾಜ್ಯ ಸರ್ಕಾರ ಜಾರಿಗೆ ತಂದ ವಿವಿಧ ಕಲ್ಯಾಣ ಯೋಜನೆಗಳನ್ನು ವಿವರಿಸುವ ಮೂಲಕ ಪಶ್ಚಿಮ ಬಂಗಾಳ ಅಭಿವೃದ್ಧಿಗೆ ದೀದಿ ಸ್ಪೀಡ್ ಬ್ರೇಕರ್ ಎಂದ ಮೋದಿಗೆ ತಿರುಗೇಟು ನೀಡಿದರು.