ಕೃಷ್ಣಗಿರಿ: ತಮಿಳುನಾಡಿನಲ್ಲಿ ತಮಿಳುನಾಡು ಜನತೆಯೇ ಆಡಳಿತ ನಡೆಸಬೇಕು ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ಮುಂದಿನ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ಚೆನ್ನೈಯಿಂದ 260 ಕಿ.ಮೀ.ದೂರದಲ್ಲಿರುವ ಕೃಷ್ಣಗಿರಿಯಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ತಮಿಳುನಾಡು ಆಡಳಿತ ನಾಗ್ಪುರ(ಬಿಜೆಪಿ ಮಾತೃಪಕ್ಷ ಆರ್ ಎಸ್ಎಸ್ ಪ್ರಧಾನ ಕಚೇರಿ ನಾಗ್ಪುರದಲ್ಲಿದೆ)ದಿಂದ ನಡೆಯಬಾರದು. ರಾಜ್ಯದ ಎಐಎಡಿಎಂಕೆ ಸರ್ಕಾರದ ರಿಮೋಟ್ ಬಿಜೆಪಿ ಕೈಯಲ್ಲಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ತನ್ನ 15 ಮಿತ್ರರಿಗಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಭಾರಿ ಮೊತ್ತದ ಸಾಲಮಾಡಿ ವಿದೇಶಕ್ಕೆ ಪಲಾಯನ ಮಾಡಿರುವ ವಿಜಯ್ ಮಲ್ಯಾ, ನೀರವ್ ಮೋದಿ ಅವರಂತಹವರು ಯಾಕೆ ಇನ್ನು ಜೈಲು ಸೇರಿಲ್ಲ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬ್ಯಾಂಕ್ ಸಾಲ ತೀರಿಸಲಾಗದ ರೈತರನ್ನು ಜೈಲಿಗೆ ಕಳುಹಿಸುವುದಿಲ್ಲ. ಸಾಲ ತೀರಿಸದ ಶ್ರೀಮಂತರನ್ನು ಬಂಧಿಸದೆ ರೈತರನ್ನು ಜೈಲಿಗೆ ಹೋಗುವಂತೆ ಮಾಡುವುದು ಸರಿಯಲ್ಲ ಎಂದು ರಾಹುಲ್ ಹೇಳಿದ್ದಾರೆ.