ನವದೆಹಲಿ: ಹಾಲಿ ಲೋಕಸಭಾ ಚುನಾವಣೆ ನಿಮಿತ್ತ ದೇಶಾದ್ಯಂತ 2ನೇ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿರುವಂತೆಯೇ ಅತ್ತ ದೆಹಲಿಯಲ್ಲಿ ಬಿಜೆಪಿ ಸುದ್ದಿಗೋಷ್ಟಿ ವೇಳೆ ವ್ಯಕ್ತಿಯೋರ್ವ ಶೂ ಎಸೆದ ಘಟನೆ ಬೆಳಕಿಗೆ ಬಂದಿದೆ.
ದೆಹಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಇಂದು ಬಿಜೆಪಿ ರಾಜ್ಯ ಸಭಾ ಸದಸ್ಯ ಹಾಗೂ ಪರಕ್ಷದ ವಕ್ತಾರ ಜಿವಿಎಲ್ ನರಸಿಂಹನ್ ಅವರು ಸುದ್ದಿಗೋಷ್ಠಿ ನಡೆಸುತ್ತಿದ್ದರು. ಈ ವೇಳೆ ಸುದ್ದಿಗೋಷ್ಠಿ ವೇದಿಕೆ ಮುಂಭಾಗದಲ್ಲಿ ಹಾಕಲಾಗಿದ್ದ ಮೊದಲ ಸಾಲಿನ ಕುರ್ಚಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ತಾನು ಧರಿಸಿದ್ದ ಶೂ ಎಸೆದಿದ್ದಾನೆ. ಈ ವೇಳೆ ಕೂಡಲೇ ಎಚ್ಚೆತ್ತ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ಸುದ್ದಿಗೋಷ್ಠಿಯಿಂದ ಹೊರಗೆಳೆದುಕೊಂಡು ಹೋಗಿದ್ದಾರೆ.
ಇದರ ನಡುವೆಯೇ ಮಾತನಾಡಿದ ಜಿವಿಎಲ್ ನರಸಿಂಹನ್ ಅವರು, ಇದು ವಿಪಕ್ಷಗಳ ಕುತಂತ್ರ. ಇಂತಹ ನಡೆಗೆ ನಾವು ಹೆದರುವುದಿಲ್ಲ ಎದು ಹೇಳಿದ್ದಾರೆ. ಇನ್ನು ಶೂ ಎಸೆದ ವ್ಯಕ್ತಿಯನ್ನು ಶಕ್ತಿ ಭಾರ್ಗವ್ ಎಂದು ಗುರುತಿಸಲಾಗಿದ್ದು, ಆತನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೂ ಎಸೆತ, ಇಂಕ್ ದಾಳಿ ಹೊಸದೇನೂ ಅಲ್ಲ.. ಈ ಹಿಂದೆ ದೆಹಲಿ ಸಿಎಂ ಮೇಲೂ ಶೂ ಎಸೆತ, ಇಂಕ್ ದಾಳಿಯಾಗಿತ್ತು. ಅಲ್ಲದೆ ಆಟೋ ಚಾಲಕನೋರ್ನ ಆರವಿಂದ್ ಕೇಜ್ರಿವಾಲ್ ಗೆ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ್ದ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.