ದರ್ಬಾಂಗ(ಬಿಹಾರ): ಲೋಕಸಭೆ ಚುನಾವಣೆಯಲ್ಲಿ 40, 20, ಕರ್ನಾಟಕದಂತೆ ಕೇವಲ 8 ಸ್ಥಾನಗಳಲ್ಲಿ ಸ್ಪರ್ಧಿಸಿದವರು ದೇಶದ ಪ್ರಧಾನಿಯಾಗಲು ಸರದಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಪಹಾಸ್ಯ ಮಾಡಿದ್ದಾರೆ.
ಬಿಹಾರದ ಉತ್ತರ ಭಾಗದ ಪಟ್ಟಣ ದರ್ಬಾಂಗ್ ನಲ್ಲಿ ಇಂದು ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಇವರೆಲ್ಲ ದೇಶದ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಲು ಸಮರ್ಥರೇ ಎಂದು ಜನರನ್ನು ಕೇಳಿದಾಗ ಇಲ್ಲ ಎಂಬ ಉತ್ತರ ಬಂತು. ಅದಕ್ಕೆ ಮೋದಿ, ನಿಮ್ಮ ಚೌಕಿದಾರ ಭಯೋತ್ಪಾದನೆ ವಿರುದ್ಧ ಹೋರಾಡಿ ಅದನ್ನು ಬುಡದಿಂದ ಕಿತ್ತೊಗೆಯಲು ನಿರ್ಧಾರ ಮಾಡಿದ್ದಾನೆ. ಆದರೆ ಒಬ್ಬನೇ ಹೋರಾಡಲು ಸಾಧ್ಯವಿಲ್ಲ, ನಿಮ್ಮೆಲ್ಲರ ಬೆಂಬಲ ಆಶೀರ್ವಾದ ಬೇಕು, ಅದು ಮತಗಳ ಮೂಲಕ ನೀಡಬೇಕು ಎಂದು ಕೇಳಿಕೊಂಡರು.
ನೀವು ಇಲ್ಲಿ ಅಥವಾ ಬೇರೆ ಯಾವ ಕ್ಷೇತ್ರದಲ್ಲಿಯೇ ಆಗಲಿ ಬಿಜೆಪಿ ಅಥವಾ ಅದರ ಮೈತ್ರಿಪಕ್ಷದ ಅಭ್ಯರ್ಥಿಗೆ ವೋಟ್ ಮಾಡಿದರೆ ನಿಮ್ಮ ಮತ ಚೌಕಿದಾರನಿಗೆ ಹೋಗುತ್ತದೆ ಎಂದರು.
ರಾಷ್ಟ್ರೀಯ ಭದ್ರತೆ ವಿಚಾರವನ್ನು ಎನ್ ಡಿಎ ಮತಗಳಿಕೆಯ ಅಸ್ತ್ರವಾಗಿ ತೆಗೆದುಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಟೀಕೆಯನ್ನು ಪ್ರಸ್ತಾಪಿಸಿ ಉತ್ತರಿಸಿದ ಪ್ರಧಾನಿ ಭಯೋತ್ಪಾದನೆಯನ್ನು ಬುಡಸಮೇತ ಕಿತ್ತೊಗೆಯುವುದು ಅತ್ಯಗತ್ಯವಾಗಿದ್ದು ಆ ಹಣವನ್ನು ದೇಶದ ಅಭಿವೃದ್ಧಿ ಕೆಲಸಗಳಿಗೆ ಮತ್ತು ಬಡವರ ಏಳಿಗೆಗೆ ಬಳಸಿಕೊಳ್ಳಬಹುದು ಎಂದರು.
ಮಹಾಘಟಬಂಧನದ ಹೆಸರಿನ ಪಕ್ಷಗಳು ಬಾಲಾಕೋಟ್ ನಲ್ಲಿ ನಡೆದ ವಾಯುದಾಳಿಗೆ ಸಾಕ್ಷಿಗಳನ್ನು ಹುಡುಕುವಲ್ಲಿ ಮತ್ತು ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷಪೂರಿತ ತಪ್ಪು ಕಂಡುಹಿಡಿಯುವಲ್ಲಿ ನಿರತವಾಗಿವೆ. ಅವರಿಗೆ ದೇಶದ ಭದ್ರತೆ ಮುಖ್ಯವಾಗಿಲ್ಲ, ಆದರೆ ನವಭಾರತದ ನಿರ್ಮಾಣಕ್ಕೆ ಭೀತಿ ಮುಕ್ತ ಭಯೋತ್ಪಾದನೆ ರಹಿತ ವಾತಾವರಣ ಮುಖ್ಯವಾಗಿದೆ. ನಮ್ಮ ನೆರೆ ದೇಶದಲ್ಲಿ ಹಲವು ಭಯೋತ್ಪಾದನೆ ಸಂಘಟನೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos