ಉತ್ತರ ಪ್ರದೇಶ: ದೇವಾಲಯಗಳ ನಾಡು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದರು. ಎರಡನೇ ಅವಧಿಗೆ ಆಯ್ಕೆ ಬಯಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನರೇಂದ್ರ ಮೋದಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ವಿವಿಧ ಕ್ಷೇತ್ರಗಳ ನಾಲ್ವರು ಸಹಿ ಹಾಕಿದರು. ಸ್ಥಳೀಯ ನಿವಾಸಿಗಳಾದ ಮದನ್ ಮೋಹನ್ ಮಾಳವಿಯಾ ಮೊಮ್ಮಗಳು ಡಾ. ಅನ್ನಪೂರ್ಣ ಶುಕ್ಲಾ, ರಮಾಶಂಕರ್ ಪಟೇಲ್ ಸುಭಾಷ್, ಚಂದ್ರಗುಪ್ತಾ, ಜಗದೀಶ್ ಚೌದರಿ ಅವರು ಮೋದಿ ಅವರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದರು. ನಾಮ ಪತ್ರ ಸಲ್ಲಿಕೆ ವೇಳೆ ಮೋದಿ ಚೌಕಿದಾರ್ ಎಂದು ಅನುಮೋದನೆ ಮಾಡಿದ್ದಾರೆ.
ಮೋದಿ ನಾಮಪತ್ರಕ್ಕೆ ಸೂಚಕರಾಗಿ ಸಹಿ ಹಾಕಿದ್ದ ಮದನ್ ಮೋಹನ್ ಮಾಳವಿಯಾ ಅವರ ಮೊಮ್ಮಗಳು ಡಾ. ಅನ್ನಪೂರ್ಣ ಶುಕ್ಲಾ ಅವರ ಕಾಲಿಗೆ ನಮಸ್ಕರಿಸಿ ಪ್ರಧಾನಿ ಮೋದಿ ವಂದನೆ ತಿಳಿಸಿದರು.
ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎನ್ ಡಿಎ ನಾಯಕರು ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಶುಭ ಹಾರೈಸಿದರು. ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ನಿತೀಶ್ ಕುಮಾರ್, ರಾಮ್ ವಿಲಾಸ್ ಪಾಸ್ವನ್ , ಉದ್ದವ್ ಠಾಕ್ರೆ ಮತ್ತಿತರ ನಾಯಕರು ನರೇಂದ್ರ ಮೋದಿಗೆ ಶಾಲು ಹೂದಿಸಿ, ಹೂ ಗುಚ್ಛ ನೀಡುವ ಮೂಲಕ ಶುಭ ಕೋರಿದರು.
ವಾರಣಾಸಿಯಲ್ಲಿರುವ ಕಾಲ ಬೈರವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ನರೇಂದ್ರ ಮೋದಿ ಜಿಲ್ಲಾಧಿಕಾರಿ ಕಚೇರಿಗೆ ತೆರೆಳಿದರು.ಈ ಸಂದರ್ಭ ಜನಪ್ರವಾಹವೇ ಹರಿದುಬಂದಿತ್ತು.