ಲಖನೌ: ಬಿಜೆಪಿಯ ವರಿಷ್ಠರು ಗುಜರಾತಿನ ಕ್ರೀಮಿನಲ್ ಗಳು ಎಂದಿದ್ದ ಪಕ್ಷದ ಹಿರಿಯ ಮುಖಂಡರೊಬ್ಬರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ.
ಸರಣಿ ಟ್ವೀಟ್ ಮೂಲಕ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಪಕ್ಷದ ಮಾಜಿ ವಕ್ತಾರ ಐಪಿ ಸಿಂಗ್ , ಅಜಂಗಡದಿಂದ ಸ್ಪರ್ಧಿಸುತ್ತಿರುವ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಖಿಲೇಶ್ ಯಾದವ್ ಅವರನ್ನು ಹೊಗಳಿ, ತಮ್ಮ ಮನೆಯನ್ನು ಚುನಾವಣಾ ಪ್ರಚಾರದ ಕಚೇರಿಯನ್ನಾಗಿ ಉಪಯೋಗಿಸಿಕೊಳ್ಳುವಂತೆ ಕೇಳಿಕೊಂಡಿದ್ದರು.
ರಾಜ್ಯ ಬಿಜೆಪಿ ಅಧ್ಯಕ್ಷರ ನಿರ್ದೇಶನದ ಮೇರೆಗೆ ಐಪಿ ಸಿಂಗ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಲಖನೌ ಬಿಜೆಪಿ ಘಟಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.
ತಾನು ಕ್ಷತ್ರೀಯ ಕುಟುಂಬಕ್ಕೆ ಸೇರಿದ್ದು, ಗುಜರಾತಿನ ಇಬ್ಬರು ಕ್ರೀಮಿನಲ್ ಗಳು ಐದು ವರ್ಷದಿಂದ ಹಿಂದಿ ಭಾಷಿಕರನ್ನು ಮೂರ್ಖರನ್ನಾಗಿಸಿದ್ದಾರೆ. ಉತ್ತರ ಪ್ರದೇಶ ಗುಜರಾತ್ ರಾಜ್ಯಕ್ಕಿಂತಲೂ ಆರ್ಥಿಕವಾಗಿ ಬಲಿಷ್ಠವಾಗಿದೆ. ಪ್ರಧಾನಮಂತ್ರಿ ಅಥವಾ ಪ್ರಚಾರ ಮಂತ್ರಿಯನ್ನು ಆಯ್ಕೆ ಮಾಡಲು ನಮ್ಮಿಂದಾಗುವುದಿಲ್ಲವೇ ಎಂದು ಟ್ವೀಟ್ ಮಾಡಿದ್ದರು.
ಅಖಿಲೇಶ್ ಸ್ಪರ್ಧೆಯಿಂದಾಗಿ ಪೂರ್ವ ಉತ್ತರ ಪ್ರದೇಶದ ಜನರು ಖುಷಿಯಾಗಿದ್ದಾರೆ. ಜಾತಿ, ಧರ್ಮಾಧಾರಿತ ರಾಜಕಾರಣ ಅಂತ್ಯವಾಗಲಿದೆ ಎಂದು ಐಪಿ ಸಿಂಗ್ ಹೇಳಿಕೆ ನೀಡಿದ್ದರು.