ಬೆಂಗಳೂರು: ಬಡವರಿಗೆ ವರ್ಷಕ್ಕೆ 72 ಸಾವಿರ ರು. ಕನಿಷ್ಠ ಆದಾಯ ಖಾತ್ರಿ ಭರವಸೆ ನೀಡಿದ್ದ ಕಾಂಗ್ರೆಸ್ ಈಗ ಮತ್ತೊಂದು ಮಹತ್ತರ ಭರವಸೆ ನೀಡಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಹೊಸ ಉದ್ಯಮಕ್ಕೆ ಮೂರು ವರ್ಷ ಅನುಮತಿ ಬೇಕಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲ ಬಾರಿಗೆ ಸಣ್ಣ, ಅತಿ ಸಣ್ಣ ಕಾರ್ಖಾನೆ ಮತ್ತು ಸ್ಟಾರ್ಟ್ಅಪ್ಗಳನ್ನು ಆರಂಭಿಸಲು ಮೂರು ವರ್ಷಗಳವರೆಗೆ ಸರ್ಕಾರದ ಅನುಮತಿಯಿಲ್ಲದೆ ಆರಂಭಿಸಿ, ನಡೆಸಬಹುದು ಎಂದು ರಾಹುಲ್ ಗಾಂಧಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದರಿಂದ ಯಾರು ಬೇಕಿದ್ದರೂ ಸಣ್ಣ ಉದ್ದಿಮೆಗಳನ್ನು ಶುರು ಮಾಡಬಹುದು ಮತ್ತು ಯುವಕರು ಸ್ವಂತ ಉದ್ಯಮ ಸ್ಥಾಪನೆಗೆ ಸಹಾಯವಾಗಲಿ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ಈ ಭರವಸೆಯನ್ನು ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅನಗತ್ಯ ಮತ್ತು ಕೆಟ್ಟ ತೆರಿಗೆಗಳನ್ನು ತೆಗೆದುಹಾಕುತ್ತೇವೆ ಎಂದಿದ್ದಾರೆ.
ಭಾರತದ ಬಡತನದ ಮೇಲೆ ಸರ್ಜಿಕಲ್ ದಾಳಿ ನಡೆಸುತ್ತೇವೆ. ಬಡತನ ನಿರ್ಮೂಲನೆಗಾಗಿ ಪ್ರತಿವರ್ಷ ಬಡವರ ಖಾತೆಗೆ ವಾರ್ಷಿಕ 72,000 ರೂ.ಗಳನ್ನು ನೇರವಾಗಿ ಜಮೆ ಮಾಡುವ ಯೋಜನೆಯನ್ನು ತರುತ್ತೇವೆ. ನ್ಯಾಯ್ ಎಂಬ ಹೆಸರಿನ ಯೋಜನೆಯಡಿ ಭಾರತದ 5 ಕೋಟಿ ಬಡವರು ಇದರ ಫಲಾನುಭವಿಗಳಾಗಲಿದ್ದಾರೆ. ಇದು ನಮ್ಮ ಕನಸಿನ ಯೋಜನೆಯಾಗಿದ್ದು, ಭಾರತದ ಬಡತನ ನಿರ್ಮೂಲನೆಗೆ ಅಂತಿಮ ದಾಳಿ ಎಂದು ರಾಹುಲ್ ಗಾಂಧಿ ಇತ್ತೀಚೆಗೆ ಘೋಷಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos