ಸಿಕಾರ್: ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮೊದಲ ವ್ಯಂಗ್ಯವಾಡಿತ್ತು. ನಂತರ ವಿರೋಧ ವ್ಯಕ್ತಪಡಿಸಿತು. ಈಗ 'ಮೀ ಟೂ' ಎನ್ನುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ತಿರುಗೇಟು ನೀಡಿದ್ದಾರೆ.
ಇಂದು ರಾಜಸ್ಥಾನದ ಸಿಕಾರ್ನಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿ ಮಾನತನಾಡಿದ ಮೋದಿ, ಸುಳ್ಳುಗಳ ಸರಮಾಲೆಯನ್ನು ಹೆಣೆಯುವುದನ್ನೇ ಸಿದ್ಧಾಂತ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆಯೂ ಸುಳ್ಳು ಹೇಳಿದೆ. ಕಾಂಗ್ರೆಸ್ನವರು ಕೇವಲ ಪೇಪರ್ಗಳ ಮೇಲೆ ಮಾತ್ರ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
"ಪೆಹಲೆ ಉಪೇಕ್ಷಾ, ಫಿರ್ ವಿರೋಧ್, ಅಬ್ ಮೀ ಟೂ ಮೀ ಟೂ (ಮೊದಲು ನಿರ್ಲಕ್ಷ್ಯ ಮಾಡಿದರು, ನಂತರ ವಿರೋಧಿಸಿದರು, ಈಗ ನಾನು ಕೂಡ ನಾನು ಕೂಡ) ಎಂದು ಹೇಳುತ್ತಿದ್ದಾರೆ ಮೋದಿ ಲೇವಡಿ ಮಾಡಿದರು.
ಪುಲ್ವಾಮಾ ಉಗ್ರ ದಾಳಿಯ ನಂತರ ಪಾಕಿಸ್ತಾನ ಮೇಲೆ ಮಾಡಿದ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಕಾಂಗ್ರೆಸ್ ಮೊದಲು ವಿರೋಧ ವ್ಯಕ್ತಪಡಿಸಿತು. ಆದರೆ ಜನ ನಮ್ಮ ಜತೆ ನಿಂತರು. ನಮಗೆ ಬೆಂಬಲ ಕೊಟ್ಟರು ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ನಾಯಕರು ನಾಲ್ಕು ತಿಂಗಳ ಹಿಂದೆ ಮೂರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದರು. ಈಗ ಆರು ಎಂದು ಹೇಳುತ್ತಿದ್ದಾರೆ. ಈ ಸಂಖ್ಯೆ ಮುಂದಿನ ದಿನಗಳಲ್ಲಿ 600 ಕೂಡ ಆಗಬಹುದು. ಪೇಪರ್ ಮೇಲೆ ದಾಳಿ ನಡೆಸಿದರೆ ಹೀಗೆ ಆಗೋದು. ಕಾಂಗ್ರೆಸ್ ಕೇವಲ ಸುಳ್ಳು ಹೇಳುವುದರಲ್ಲಿ ಎತ್ತಿದ ಕೈ ಎಂದು ಪ್ರಧಾನಿ ಮೋದಿ ಆರೋಪಿಸಿದರು.
ನಿನ್ನೆಯಷ್ಟೇ ಯುಪಿಎ ಸರ್ಕಾರದ ಅವಧಿಯಲ್ಲಿ ಗಡಿಯಲ್ಲಿ ಉಗ್ರರ ವಿರುದ್ಧ ಆರು ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು. ಅಲ್ಲದೆ ತಾನು ಆರು ಬಾರಿ ನಡೆಸಿದ ಸರ್ಜಿಕಲ್ ದಾಳಿಗಳ ವಿವರ ನೀಡಿತ್ತು.