ಲಕ್ನೊ (ಉತ್ತರ ಪ್ರದೇಶ): ನಾವು ವೇದಿಕೆಗೆ ಭಜನೆ ಮಾಡಲು, ಭಕ್ತಿಗೀತೆ ಹಾಡಲು ಹೋಗುವುದಲ್ಲ, ವೇದಿಕೆ ಮೇಲೆ ನಿಂತು ವಿರೋಧ ಪಕ್ಷಗಳನ್ನು ಸೋಲಿಸಲು ಅವರ ವಿರುದ್ಧ ಪ್ರಬಲ ವಾಗ್ದಾಳಿ ನಡೆಸುವುದು ನಮ್ಮ ಉದ್ದೇಶವಾಗಿರುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹಿನ್ನಲೆಯಲ್ಲಿ ಬಿರುಸಿನ ಪ್ರಚಾರ ನಡೆಸುವ ಸಂದರ್ಭದಲ್ಲಿ ಇತ್ತೀಚೆಗೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಂಬಂಧಪಟ್ಟಂತೆ ಚುನಾವಣಾ ಆಯೋಗ ಹೊರಡಿಸಿರುವ ಶೋಕಾಸ್ ನೊಟೀಸ್ ಗೆ ಸಂಬಂಧಪಟ್ಟಂತೆ ಎಎನ್ಐ ಸುದ್ದಿಸಂಸ್ಥೆಗೆ ಅವರು ಪ್ರತಿಕ್ರಿಯೆ ನೀಡಿದರು.
ವಿರೋಧ ಪಕ್ಷಗಳ ದೌರ್ಬಲ್ಯಗಳನ್ನು ಜನತೆ ಮುಂದಿಡುವುದು ನಮ್ಮ ಕೆಲಸ. ಕಾಂಗ್ರೆಸ್, ಸಮಾಜವಾದಿ ಪಕ್ಷ ಅಥವಾ ಬಹುಜನ ಸಮಾಜವಾದಿ ಪಕ್ಷದವರೇ ಆಗಿರಲಿ, ಚುನಾವಣೆ ಪ್ರಚಾರದ ವೇಳೆ ನಮ್ಮ ಬಗ್ಗೆ ಹೇಳಿದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಾವು ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಿದರೆ ಅದನ್ನು ತಪ್ಪು ಎಂದು ಏಕೆ ಹೇಳಬೇಕು ಎಂದು ಆದಿತ್ಯನಾಥ್ ಪ್ರಶ್ನಿಸಿದ್ದಾರೆ.