ವಾರಣಾಸಿ: ಕೇಂದ್ರ ಸರ್ಕಾರ ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾರ್ಥವಾಗಿ ವಾರಣಾಸಿಯಲ್ಲಿ ಪ್ರಧಾನಿ ಮೋದಿ ಅವರ ವಿರುದ್ಧ ಕಣಕ್ಕಿಳಿದಿದ್ದ 24 ಮಂದಿ ರೈತರ ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ತಿಳಿದುಬಂದಿದೆ.
ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ನಾಮಪತ್ರ ಸಲ್ಲಿಕೆ ಮಾಡಿದ್ದ ತೆಲಂಗಾಣ ಮೂಲದ ಒಟ್ಟು 25 ಮಂದಿ ಅರಿಶಿಣ ಬೆಳೆಗಾರರ ಪೈಕಿ 24 ಮಂದಿಯ ನಾಮಪತ್ರ ತಿರಸ್ಕೃತವಾಗಿವೆ. ಈ ಬಗ್ಗೆ ಮಾಹಿತಿ ನೀಡಿರುವ ಚುನಾವಣಾಧಿಕಾರಿ, ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದ ತೆಲಂಗಾಣ ಮೂಲದ 25 ರೈತರ ಪೈಕಿ 24 ನಾಮಪತ್ರಗಳು ತಿರಸ್ಕೃತಗೊಂಡಿವೆ. ಇಸ್ತಾರಿ ಸನ್ನಮ್ ನರಸಯ್ಯ ಎಂಬ ರೈತರ ನಾಮಪತ್ರ ಮಾತ್ರ ಸ್ವೀಕಾರವಾಗಿದೆ ಎಂದು ಹೇಳಿದ್ದಾರೆ.
ನಾಮಪತ್ರ ತಿರಸ್ಕಾರದ ಹಿಂದೆ ರಾಜಕೀಯ ಷಡ್ಯಂತ್ರ
ಇನ್ನು 24 ರೈತರ ನಾಮಪತ್ರ ತಿರಸ್ಕೃತಗೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ತೆಲಂಗಾಣ ಅರಿಶಿಣ ಬೆಳಗಾರರ ಒಕ್ಕೂಟದ ಅಧ್ಯಕ್ಷ ಕೋಟಪತಿ ನರಸಿಂಹ ನಾಯ್ಜು ಅವರು, ನಮ್ಮ 24 ರೈತರ ನಾಮಪತ್ರ ತಿರಸ್ಕಾರದ ರಾಜಕೀಯ ಷಡ್ಯಂತ್ರವಡಗಿದೆ. ಈ ಬಗ್ಗೆ ನಾವು ದೂರು ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಮೋದಿ ಸರ್ಕಾರ ಅರಿಶಿಣ ಬೆಳೆಗಾರರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ರೈತರಿಗೆ ನೀಡಿದ್ದ ಭರವಸೆ ಹುಸಿಯಾಗಿದ್ದು, ರೈತರ ಯಾವುದೇ ಸಮಸ್ಯೆ ನೀಗಿಲ್ಲ ಎಂದು ಆರೋಪಿಸಿ ದೇಶದ ಗಮನ ಸೆಳೆಯುವ ಉದ್ದೇಶದಿಂದ ತೆಲಂಗಾಣ ಮೂಲದ 25 ಅರಿಶಿಣ ಬೆಳೆ ರೈತರು ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡಿದ್ದರು.