ಗೋರಖಪುರ್: ಹಿಂದಿನ ಸರ್ಕಾರದ ಅವಧಿಯಲ್ಲಿ ಮೊಹರ್ರಂ ಹಾಗೂ ಈದ್ ದಿನಗಳಲ್ಲಿ ರಾಜ್ಯದ ಜನ ಉತ್ತಮ ವಿದ್ಯುತ್ ಸಂಪರ್ಕ ಹೊಂದಿರುತ್ತಿದ್ದರೆ, ಹೋಳಿ, ದೀಪಾವಳಿಯನ್ನು ಕತ್ತಲಲ್ಲೇ ಆಚರಿಸಬೇಕಿತ್ತು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ.
ಸಿದ್ಧಾರ್ಥ್ ನಗರ್ ಜಿಲ್ಲೆಯ ದೋಮರಿಗಂಜ್ ಕ್ಷೇತ್ರದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್ "ಸಬ್ಕಾ ಸಾಥ್, ಸಬ್ಕಾ ವಿಕಾಸ್ ಎಂಬ ತತ್ವವನ್ನು ಪ್ರಧಾನಿ ಮೋದಿ ನಂಬಿದ್ದಾರೆ. ಆದರೆ ಹಿಂದೆ ಪರಿಸ್ಥಿತಿ ವಿಭಿನ್ನವಾಗಿತ್ತು. ಹಿಂದೆ, ವಿದ್ಯುತ್ ಸಂಪರ್ಕಗಳನ್ನು ಜಾತಿ ಪದ್ದತಿಗಳ ಮೇಲೆ, ಧರ್ಮದ ಆಧಾರದಲ್ಲಿ ನೀಡಲಾಗಿತ್ತು. ಜನರು ಹೋಳಿ ಮತ್ತು ದೀಪಾವಳಿ ಗೆ ವಿದ್ಯುತ್ ಅಭಾವವನ್ನು ಎದುರಿಸುತ್ತಿದ್ದರೆ ಮೊಹರ್ರಂ ಹಾಗೂ ಈದ್ ಸಮಯದಲ್ಲಿ ಯತೇಚ್ಚವಾಗಿ ವಿದ್ಯುತ್ ಸರಬರಾಜಾಗುತ್ತಿದ್ದದ್ದು ಕಾಣುತ್ತಿದ್ದರು." ಎಂದು ದೂಷಿಸಿದ್ದಾರೆ.
ಆದಿತ್ಯನಾಥ್ ಅವರ ಹೇಳಿಕೆ ಈ ಹಿಂದೆ 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆಗೆ ಮುನ್ನ ನರೇಂದ್ರ ಮೋದಿ ರ್ಯಾಲಿಯೊಂದರಲ್ಲಿ ನೀಡಿದ್ದ ಹೇಳಿಕೆಯನ್ನು ನೆನಪಿಸುತ್ತದೆ. ಮೋದಿ ಅಂದಿನ ರ್ಯಾಲಿಯಲ್ಲಿ "ಜನರು ರಂಜಾನ್ ವೇಳೆಗೆ ವಿದ್ಯುತ್ ಪಡೆಯುತ್ತಿದ್ದಾರೆ ಅವರು ದೀಪಾವಳಿಗೆ ವಿದ್ಯುತ್ ಪಡೆಯುವಂತಾಗಬೇಕು" ಎಂದಿದ್ದರು.
ಆದಿತ್ಯನಾಥ್ ಎಸ್ಪಿ-ಬಿಎಸ್ಪಿ- ಮೈತ್ರಿಕೂಟಕ್ಕೆ ಟಾಂಗ್ ನೀಡಿದ್ದು "ಶಿವಪಾಲ್ ಯಾದವ್ (ಅಖಿಲೇಶ್ ಅವರ ಚಿಕ್ಕಪ್ಪ) ಅವರಿಗೆ ಯಾವುದೇ ಸಹೋದರಿ ಇಲ್ಲ ಎಂದು ಹೇಳುತ್ತಾರೆ, ಆದ್ದರಿಂದ, 'ಬುವಾ(ಅತ್ತೆ) ಎಲ್ಲಿಂದ ಬರಬೇಕು? ಎಂದಿದ್ದಾರೆ. ಅಲ್ಲದೆ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಬಗ್ಗೆ ಮಾತನಾಡಿ "ಪರಸ್ಪರರ ಪಾಪಗಳನ್ನು ಮರೆಮಾಚಲಿಕ್ಕಾಗಿ ಈ ಹೊಸ ಸಂಬಂಧ ರೂಪಿಸಿಕೊಳ್ಲಲಾಗಿದೆ. ಆದರೆ ಮೇ 23ರಂದು ಈ ಸಂಬಂಧದ ಕೊಂಡಿ ಕಳಚಿ ಬೀಳಲಿದೆ ಎಂಬುದನ್ನು ಎಲ್ಲರೂ ಅರಿತಿದ್ದಾರೆ"ಎಂದರು.
ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವದ್ರಾ ಬಗೆಗೆ ಉಲ್ಲೇಖಿಸಿ "ತಮ್ಮ ಪಕ್ಷವು ರಾಜ್ಯದ ಎಲ್ಲೆಲ್ಲಿ ದುರ್ಬಲವಾಗಿದೆಯೋ ಅಲ್ಲೆಲ್ಲಾ ಜನರು ಬಿಜೆಪಿಗೆ ಮತ ನೀಡಲಿದ್ದಾರೆ. ಎಂದು ಅವರು ಹೇಳಿದ್ದಾರೆ.