ನವದೆಹಲಿ: ಗೌತಮ್ ಗಂಭೀರ್ ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆಪ್ ಅಭ್ಯರ್ಥಿ ಆತಿಶಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಆರೋಪ ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ.
ಅರವಿಂದ್ ಕೇಜ್ರಿವಾಲ್ ರೀತಿಯ ವ್ಯಕ್ತಿಯನ್ನು ದೆಹಲಿ ಮುಖ್ಯಮಂತ್ರಿಯನ್ನಾಗಿ ಪಡೆದಿರುವುದಕ್ಕೆ ನಾಚಿಕೆಯಾಗುತ್ತದೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. "ಆಪ್ ಅಭ್ಯರ್ಥಿ ವಿರುದ್ಧದ ಕರಪತ್ರಗಳನ್ನು ನಾನು ಪ್ರಕಟಿಸಿ, ಹಂಚುತ್ತಿರುವ ಆರೋಪ ಸಾಬೀತಾದರೆ ತಕ್ಷಣವೇ ಚುನಾವಣಾ ಕಣದಿಂದ ಹಿಂದೆ ಸರಿಯುತ್ತೇನೆ ಎಂದು ಕೇಜ್ರಿವಾಲ್ ಹಾಗೂ ಅಭ್ಯರ್ಥಿ ಆತಿಶಿಗೆ ಗಂಭೀರ್ ಸವಾಲು ಹಾಕಿದ್ದಾರೆ.
ನಿಮ್ಮದೇ ಪಕ್ಷದ ಮಹಿಳೆಯ ಗೌರವ, ಘನತೆಗಳಿಗೆ ಧಕ್ಕೆ ತರುತ್ತಿರುವ ನಿಮ್ಮ ನಡೆ ಅಸಹ್ಯ ಮೂಡಿಸುತ್ತದೆ, ಇದು ಚುನಾವಣೆ ಗೆಲ್ಲುವುದಕ್ಕಾಗಿ ಮಾಡಲಾಗುತ್ತಿದೆ, ನಿಮ್ಮ ಮನಸ್ಸನ್ನು ಸ್ವಚ್ಛಗೊಳಿಸುವುದಕ್ಕಾಗಿ ಪೊರಕೆಯ ಅವಶ್ಯಕತೆ ಇದೆ ಎಂದು ಗಂಭೀರ್ ಟ್ವಿಟರ್ ನಲ್ಲಿ ಕೇಜ್ರಿವಾಲ್ ಹಾಗೂ ಪಕ್ಷದವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆತಿಶಿ ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚಿಕೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.
ಮೇ.09 ರಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಆತಿಶಿ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ತಮ್ಮ ವಿರುದ್ಧ ಅವಹೇಳನಕಾರಿ ಕರಪತ್ರ ಹಂಚುತ್ತಿದ್ದಾರೆ ಎಂದು ಆರೋಪಿಸಿದ್ದರು.