ಕೊಲ್ಕತ್ತಾ: ನಾಳೆಯಿಂದ ಚುನಾವಣಾ ಪ್ರಚಾರವನ್ನು ರದ್ದುಗೊಳಿಸಿರುವ ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಚುನಾವಣಾ ಆಯೋಗ, ಪ್ರಧಾನಮಂತ್ರಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗ ಬಿಜೆಪಿಯ ನಿಯಂತ್ರಣದಲ್ಲಿದೆ. ಇದು ಅಸಮರ್ಪಕ ನಿರ್ಧಾರವಾಗಿದೆ. ಅಮಿತ್ ಶಾ ಕಾರಣದಿಂದ ನಿನ್ನೆ ಹಿಂಸಾಚಾರ ಸಂಭವಿಸಿದೆ. ಆದರೆ, ಚುನಾವಣಾ ಆಯೋಗ ಏಕೆ ಅಮಿತ್ ಶಾಗೆ ನೋಟಿಸ್ ನೀಡಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಎರಡು ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ಅವಕಾಶ ನೀಡಿ ನಂತರ ಪ್ರಚಾರಕ್ಕೆ ಅವಕಾಶ ನೀಡದ ಚುನಾವಣಾ ಆಯೋಗದ ನಿರ್ಧಾರ ಅನ್ಯಾಯ, ಅನೈತಿಕ ಹಾಗೂ ರಾಜಕೀಯ ಪಕ್ಷದಿಂದ ಕೂಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಈಶ್ವರ್ ಚಂದ್ರ ವಿದ್ಯಾಸಾಗರ್ ಪ್ರತಿಮೆಯನ್ನು ಬಿಜೆಪಿ ಬೆಂಬಲಿಗರೆ ಧ್ವಂಸಗೊಳಿಸಿದ್ದಾರೆ.ಆದರೆ, ಮೋದಿ ಕ್ಷಮೆ ಕೇಳುತ್ತಿಲ್ಲ. ಬಂಗಾಳದ ಜನರು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.