ಕೋಲ್ಕತ್ತಾ: ಲೋಕಸಭೆ ಚುನಾವಣೆಯ ಕಡೇ ಹಂತದ ಮತದಾನ ಭಾನುವಾರ ನಡೆಯುಯುತ್ತಿದ್ದು ಕರ್ನಾಟಕ, ಪಶ್ಚಿಮ ಬಂಗಾಳ ಸೇರಿ ಹಲವು ಕಡೆ ವಿಧಾನಸಭೆಗೆ ಉಪ ಚುನಾವಣೆ ಸಹ ನಡೆಯುತ್ತಿದೆ. ಈ ನಡುವೆ ಬಂಗಾಳದ ಇಸ್ಲಾಂಪುರಿ ಎಂಬಲ್ಲಿ ಮತಗಟ್ಟೆ ಸಮೀಪವೇ ಬಾಂಬ್ ಸ್ಪೋಟವಾಗಿದೆ.
ಬಂಗಾಳದ ಬಸಿರ್ಹಾತ್ ನಲ್ಲಿನ ಮತಗಟ್ಟೆ ಸಂಖ್ಯೆ 189 ರಲ್ಲಿ ಬಾಂಬ್ ಸ್ಪೊಟ ಸಂಭವಿಸಲಿದೆ ಎಂಬ ಬಿಜೆಪಿ ಅಭ್ಯರ್ಥಿಯ ಆರೋಪದ ಹಿನ್ನೆಲೆ ಹೆಚ್ಚುವ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಅಲ್ಲದೆ ಇಸ್ಲಾಂಪುರಿಯಲ್ಲಿ ಬಾಂಬ್ ಸ್ಪೋಟವಾಗಿರುವ ಹಿನ್ನೆಲೆ ತೀವ್ರ ಮುನ್ನೆಚ್ಚರಿಕೆ ಕ್ರಮ ಜರುಗಿಸಲಾಗಿದೆ.
ಈ ನಡುವೆ ಬಿಜೆಪಿ ಸಂಸದ ಸಯಂತನ್ ಬಸು ಟಿಎಂಸಿ ಕಾರ್ಯಕರ್ತರು ಸುಮಾರು 100ಕ್ಕೂ ಹೆಚ್ಚು ಮಂದಿಗೆ ಮತದಾನ ಮಾಡಲು ಅವಕಾಶ ನೀಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದಲ್ಲದೆ ಚುನಾವಣೆ ಮುನ್ನಾ ದಿನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆಗಳು ಸಂಬವಿಸಿದೆ.ಭಟ್ಪರಾ ಪ್ರದೇಶದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾಮಾರಿ ಸಂಭವಿಸಿದೆ. ಈ ವೇಳೆ ಗುಂಡಿನ ದಾಳಿ, ಬಾಂಬ್ ದಾಳಿಗಳೂ ನಡೆದಿದ್ದು ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಸದ್ಯ ಈ ಪ್ರದೇಶದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಏಳು ಹಂತದ ಚುನಾವಣೆಯ ಅಂತಿಮ ಸುತ್ತಿನಲ್ಲಿ ಮೊದಲ ಮೂರು ಗಂಟೆಗಳ ಮತದಾನದಲ್ಲಿ ಶೇ. 12ರಷ್ಟು ಮತದಾನವಾಗಿದೆ.