ದೇಶ

ವಿವಾದಾತ್ಮಕ ಹೇಳಿಕೆ ನಂತರ ಪ್ರಗ್ಯಾ ಸಿಂಗ್ ಮೌನವ್ರತ, ಆತ್ಮಾವಲೋಕನ

Lingaraj Badiger
ಭೋಪಾಲ್‌: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದು ಹೇಳಿ ವಿವಾದಾಕ್ಕೀಡಾಗಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಠಾಕೂರ್ ಅವರು ಈಗ ಮೌನವ್ರತ ಆಚರಿಸುತ್ತಿದ್ದಾರೆ.
ಲೋಕಸಭೆ ಚುನಾವಣೆ ಮುಗಿದ ಮೇಲೆ ಇದು ಚಿಂತನೆಯ ಸಮಯ ಎಂದಿರುವ ಪ್ರಗ್ಯಾ ಸಿಂಗ್, ನನ್ನ ಹೇಳಿಕೆಗಳಿಂದ ಜನರ ಭಾವನೆಗೆ ಧಕ್ಕೆ ತಂದಿದೆ. ಅದಕ್ಕಾಗಿ ನಾನು ಕ್ಷಮೆ ಕೇಳಿದ್ದೇನೆ. ಈಗ ಆತ್ಮಾವಲೋಕನಕ್ಕಾಗಿ ಮೂರು ದಿನಗಳ ಕಾಲ ಮೌನ ವ್ರತ ಆಚರಿಸುತ್ತಿದ್ದೇನೆ ಎಂದು 
ಟ್ವೀಟ್ ಮಾಡಿದ್ದಾರೆ.
ಮೇ 23ರಂದು ಲೋಕಸಭೆ ಚುವಾವಣೆಯ ಫಲಿತಾಂಶ ಪ್ರಕಟವಾಗುವ ದಿನ ಅಂದರೆ ಗುರುವಾರ ಪ್ರಗ್ಯಾ ಸಿಂಗ್ ಅವರ ಮೌನವ್ರತ ಮುಗಿಯಲಿದೆ.
ಮಹಾತ್ಮಾ ಗಾಂಧಿಯವರ ಹಂತಕ ನಾಥೂರಾಮ್‌ ಗೋಡ್ಸೆ ದೇಶಭಕ್ತ ಎಂದು ಸಾಧ್ವಿ ಹೇಳಿದ್ದ ಮಾತು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ತಾನು ಸಾಧ್ವಿ ಅವರನ್ನು ಕ್ಷಮಿಸಲಾರೆ ಎಂದು ಹೇಳಿದ್ದರು.
SCROLL FOR NEXT