ದೇಶ

ದೆಹಲಿ: ಪ್ರತಿಪಕ್ಷಗಳೊಂದಿಗೆ ಮಾಯಾವತಿ ಸಭೆ ಇಲ್ಲ- ಬಿಎಸ್ಪಿ ಸ್ಪಷ್ಟನೆ

Nagaraja AB

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ ಪ್ರತಿಪಕ್ಷಗಳ ಮುಖಂಡರೊಂದಿಗೆ ಯಾವುದೇ ಸಭೆ ನಡೆಸುತ್ತಿಲ್ಲ ಎಂದು ಬಿಸ್ಪಿ ಸ್ಪಷ್ಟಪಡಿಸಿದೆ.

ಚುನಾವಣಾ ಸಮೀಕ್ಷೆಗಳು ಬಹಿರಂಗಗೊಂಡ ಬೆನ್ನಲ್ಲೇ ಮಾಯಾವತಿ ಸೋನಿಯಾಗಾಂಧಿ ಸೇರಿದಂತೆ ಮತ್ತಿತರ ಪ್ರತಿಪಕ್ಷಗಳ ನಾಯಕರೊಂದಿಗೆ ಇಂದು ಸಭೆ ನಡೆಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಇದಕ್ಕೆ ಬಿಎಸ್ಪಿಯೇ ಸ್ಪಷ್ಟನೆ ನೀಡಿದ್ದು, ಅಂತಹ ಯಾವುದೇ ಮಾತುಕತೆ ಇಲ್ಲ ಎಂದು ಹೇಳಿದೆ.

ದೆಹಲಿಯಲ್ಲಿ ಮಾಯಾವತಿ ಅವರ ಯಾವುದೇ ಕಾರ್ಯಕ್ರಮ ಇಲ್ಲ, ಅವರು ಲಖನೌದಲ್ಲಿಯೇ ಇದ್ದಾರೆ ಎಂದು ಬಿಎಸ್ಪಿ ಹಿರಿಯ ಮುಖಂಡ ಸತೀಶ್ ಚಂದ್ರ ಮಿಶ್ರಾ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಅನೇಕ ಸಂಸ್ಥೆಗಳು ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ  ಕೇಂದ್ರದಲ್ಲಿ ಮತ್ತೆ ಎನ್ ಡಿಎ ಸರ್ಕಾರ ರಚಿಸಲಿದೆ ಎಂದು ಊಹಿಸಲಾಗಿದೆ. 543 ಸದಸ್ಯತ್ವ ಬಲದ ಲೋಕಸಭೆಯಲ್ಲಿ ಪ್ರಧಾನಿ ಮೋದಿ  ನೇತೃತ್ವದ ಬಿಜೆಪಿ ಸರ್ಕಾರ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹೇಳಲಾಗಿದೆ.

SCROLL FOR NEXT