ನವದೆಹಲಿ: ಲೋಕಸಭೆ ಮಹಾಚುನಾವಣೆ ಫಲಿತಾಂಶ ಮೇ 23ರಂದು ಗುರುವಾರ ಘೊಷಣೆಯಾಗಲಿದ್ದು ಈ ಕುರಿತಂತೆ ಮಂಗಳವಾರ ಎರಡು ಅತ್ಯಂತ ಪ್ರಮುಖ ವಿಷಯಗಳು ಬಹಿರಂಗವಾಗಿದೆ.
ಮೊದಲನೆಯದಾಗಿ ಚುನಾವಣೆ ಮತ ಎಣಿಕೆ ಸಮಯದಲ್ಲಿ ಇವಿಎಂ ಮತಗಳ ಜೊತೆ ಶೇ. 100 ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆಯಾಗಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾ ಮಾಡಿದೆ.
ತಂತ್ರಜ್ಞರ ಗುಂಪೊಂದು ಚುನಾವಣಾ ಮತ ಎಣಿಕೆ ವೇಳೆ ಶೇ. 100ರಷ್ಟೂ ವಿವಿಪ್ಯಾಟ್ ಚೀಟಿಗಳ ಹೊಂದಾಣಿಕೆ ಆಗಬೇಕೆಂದು ಕೋರಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ್ದ ಸರ್ವೋಚ್ಚ ನ್ಯಾಯಾಲಯದ ರಜಾ ಕಾಲದ ಪೀಠ ಮನವಿಯನ್ನು ತಳ್ಳಿ ಹಾಕಿದೆ.
ಇನ್ನೊಂದೆಡೆ ಇ.ವಿ.ಎಂಗಳು ಕಣ್ಗಾವಲಿನಲ್ಲಿರುವ ಮೊಹರು ಹಾಕಲ್ಪಟ್ಟ ಕೋಣೆಗಳಲ್ಲಿ ಸುರಕ್ಷಿತವಾಗಿದೆ. ಚುನಾವನಾ ಆಯೋಗದ ಕಾರ್ಯಶೈಲಿಯ ಬಗೆಗೆ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ನಂಬಿಕೆ ಇರಿಸಿಕೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.
"ಚುನಾವಣೆ ಬಳಿಕ ಎಲ್ಲಾ ಇವಿಎಂ ಗಳೂ ಸಿಸಿಟಿವಿ ಕಣ್ಗಾವಲಿರುವ ಭದ್ರವಾದ ಮೊಹರು ಹಾಕಲ್ಪಟ್ಟ ಕೋಣೆಯಲ್ಲಿದೆ. ಅಲ್ಲದೆ ಭದ್ರತಾ ಸಿಬ್ಬಂದಿಗಳು ಸತತವಾಗಿ ಈ ಕೋಣೆಗಳನ್ನು ಕಾವಲು ಕಾಯುತ್ತಿರುತ್ತಾರೆ. ಹಾಗಾಗಿ ಇವಿಎಂ ಯಂತ್ರಗಳನ್ನು ಬದಲಾಯಿಸುವುದು ಅಸಂಭವ. ವದಂತಿಗಳನ್ನು ಹರಡಬೇಡಿ, ಆಯೋಗದ ಮೇಲೆ ನಂಬಿಕೆ ಇರಿಸಿ" ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಗಳು ಟ್ವೀಟ್ ಮಾಡಿದ್ದಾರೆ.
ಇವಿಎಂಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಈ ಸ್ಪಷ್ಟೀಕರಣ ನೀಡಿದ್ದಾರೆ.
ಈ ನಡುವೆ ಮವು ಎಂಬಲ್ಲಿ ಕಳೆದ ರಾತ್ರಿ ಇವಿಎಂ ಇರಿಸಿದ್ದ ಸ್ಟ್ರಾಂಗ್ ರೂಂ ನ ಹೊರಗೆ ಜನರ ಗುಂಪೊಂದು ಆಗಮಿಸಿ ದಾಂಧಲೆ ನಡೆಸಲು ಯತ್ನಿಸಿದೆ. ಈ ವೇಳೆ ಪೋಲೀಸರು ಗುಂಪನ್ನು ಚದುರಿಸಿದ್ದಾರೆ.
ಬಿಹಾರದಲ್ಲಿ ಆರ್ ಎಲ್ ಡಿ ನಾಯಕರು ಮಹರಾಜಗಂಜ್ ಹಾಗೂ ಸರಣ್ ಲೋಕಾಸ್ಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಇವಿಎಂ ಗಳ ಅನುಮಾನಾಸ್ಪದ ಬದಲಾವಣೆ ಬಗೆಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಆಯೋಗದ ಅಧಿಕಾರಿಗಳು ಅವು ಸ್ಟ್ರಾಂಗ್ ರೂಂ ನಲ್ಲಿದ್ದ ಇವಿಎಂಗಳಲ್ಲ, ಇವು ತರಬೇತಿಗಾಗಿ ಕೊಂಡೊಯ್ಯುತ್ತಿರುವ ಇವಿಎಂ ಎಂದು ಸ್ಪಷ್ಟನೆ ನೀಡಿದ್ದರು.