ನವದೆಹಲಿ: ಪಕ್ಷದ ಕಾರ್ಯಕರ್ತರಲ್ಲಿ ನೈತಿಕ ಬಲ ತುಂಬಲು ಮುಂದಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಚುನಾವಣೋತ್ತರ ಸುಳ್ಳು ಸಮೀಕ್ಷೆಗಳಿಂದ ನಿರಾಶರಾಗಬೇಡಿ, ಎಚ್ಚರಿಕೆಯಿಂದ ಮತ್ತು ಜಾಗರೂಕತೆಯಿಂದ ಇರಿ ಎಂದು ಕರೆ ಕೊಟ್ಟಿದ್ದಾರೆ.
ವಿದ್ಯುನ್ಮಾನ ಮತಯಂತ್ರಗಳನ್ನು ಅಕ್ರಮವಾಗಿ ತಿರುಚಿರುವ ಸಾಧ್ಯತೆಯಿದ್ದು ಮತ ಎಣಿಕೆ ವೇಳೆ ಪಾರದರ್ಶಕತೆ ಕಾಪಾಡುವಂತೆ ವಿರೋಧ ಪಕ್ಷಗಳು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು ವಿರೋಧ ಪಕ್ಷಗಳಲ್ಲಿ ಮತಗಟ್ಟೆ ಸಮೀಕ್ಷೆಗಳಿಂದ ಉಂಟಾಗಿರುವ ಆತಂಕದ ಹಿನ್ನಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ತುಂಬಲು ರಾಹುಲ್ ಗಾಂಧಿ ಮುಂದಾಗಿದ್ದಾರೆ.
ನಿಮ್ಮಲ್ಲಿ ನೀವು ನಂಬಿಕೆಯಿಡಿ, ಮುಂದಿನ 24 ಗಂಟೆ ಅತ್ಯಂತ ಮಹತ್ವದ್ದಾಗಿದೆ. ಹುಷಾರಾಗಿರಿ, ಎಚ್ಚರಿಕೆಯಿಂದಿರಿ, ಯಾವುದಕ್ಕೂ ಹೆದರಬೇಡಿ. ನೀವು ಸತ್ಯ, ನ್ಯಾಯಕ್ಕಾಗಿ ಹೋರಾಡುತ್ತಿದ್ದೀರಿ. ಸುಳ್ಳು ಮತದಾನೋತ್ತರ ಸಮೀಕ್ಷೆಗಳ ಅಪಪ್ರಚಾರಗಳಿಂದ ಎದೆಗುಂದಬೇಡಿ. ನಿಮ್ಮಲ್ಲಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ನಂಬಿಕೆಯಿಡಿ, ನಿಮ್ಮ ಕಠಿಣ ಶ್ರಮ ವ್ಯರ್ಥವಾಗುವುದಿಲ್ಲ. ಜೈ ಹಿಂದ್ ಎಂದು ಹಿಂದಿಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಸಂದೇಶ ಮಾಡಿದ್ದಾರೆ.