ದೇಶ

ಬಿಜೆಪಿಯನ್ನು ತಡೆಯಲು ಶರದ್ ಪವಾರ್ ಕೂಡ ಯತ್ನ: ಕೆಸಿಆರ್, ನವೀನ್ ಪಟ್ನಾಯಕ್ ಜೊತೆ ಚರ್ಚೆ!

Sumana Upadhyaya
ನವದೆಹಲಿ: ಲೋಕಸಭೆ ಚುನಾವಣೆಯ ಮತ ಎಣಿಕೆ ಆರಂಭಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ. ಮತಗಟ್ಟೆ ಸಮೀಕ್ಷೆಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತ ಸಿಗುತ್ತದೆ ಎಂಬ ಸುದ್ದಿ ಹೊರಬಿದ್ದ ಕೂಡಲೇ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಪ್ರಮುಖ ವಿರೋಧ ಪಕ್ಷಗಳ ಸಖ್ಯ ಬೆಳೆಸಲು ಮುಂದಾಗಿದ್ದಾರೆ.
ಸಂಸತ್ತಿನಲ್ಲಿ ಅಧಿಕಾರ ಸ್ಥಾಪಿಸಲು ಸಿಗಬೇಕಾದ 272 ಮ್ಯಾಜಿಕ್ ನಂಬರ್ ಗಳಿಸುವಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ವಿಫಲವಾಗಲಿದೆ ಎಂಬ ನಂಬಿಕೆಯಲ್ಲಿ ಶರದ್ ಪವಾರ್ ಈಗಲೂ ಇದ್ದಾರೆ.
ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ರಾಜ್ಯದ ರಾಜಕಾರಣಿಯಾಗಿರುವ ಶರದ್ ಪವಾರ್ ಆಂಧ್ರ ಪ್ರದೇಶದಲ್ಲಿ ವೈಎಸ್ಆರ್ ಜಗನ್ ಮೋಹನ್ ರೆಡ್ಡಿ, ಟಿಆರ್ ಎಸ್ ಮುಖ್ಯಸ್ಥ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಒಡಿಶಾ ಸಿಎಂ ಹಾಗೂ ಬಿಜೆಡಿ ಮುಖ್ಯಸ್ಥ ನವೀನ್ ಪಾಟ್ನಾಯಕ್ ಅವರನ್ನು ಸಂಪರ್ಕಿಸಿದ್ದಾರೆ ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ.
ವಿರೋಧ ಪಕ್ಷಗಳಿಗೆ ಸರ್ಕಾರ ರಚಿಸಲು ಅವಕಾಶ ಸಿಕ್ಕಿದರೆ ತಮಗೆ ಬೆಂಬಲ ನೀಡುವಂತೆ ಕೆಸಿಆರ್ ಮತ್ತು ನವೀನ್ ಪಾಟ್ನಾಯಕ್ ಅವರನ್ನು ಶರದ್ ಪವಾರ್ ಕೋರಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸ್ಥಿರ ಸರ್ಕಾರ ರಚಿಸುವಷ್ಟು ಸಂಸದರ ಬೆಂಬಲ ಸಿಕ್ಕಿದರೆ ಖಂಡಿತಾ ಬೆಂಬಲ ನೀಡುವುದಾಗಿ ಕೆಸಿಆರ್ ಮತ್ತು ಪಾಟ್ನಾಯಕ್ ಆಶ್ವಾಸನೆ ನೀಡಿದ್ದಾರೆ ಎನ್ನಲಾಗಿದೆ.
ಮತದಾನೋತ್ತರ ಸಮೀಕ್ಷೆಗಳನ್ನು ನೌಟಾಂಕಿ ಎಂದು ಕರೆದಿದ್ದ ಶರದ್ ಪವಾರ್ ಇನ್ನೆರಡು ದಿನಗಳಲ್ಲಿ ಸತ್ಯ ಹೊರಬರಲಿದೆ. ಇಂದು ದೇಶದಲ್ಲಿ ವಿಚಿತ್ರ ವಾತಾವರಣವಿದೆ. ನಿನ್ನೆ ಸಂಜೆ 6 ಗಂಟೆಯ ನಂತರ ಎಲ್ಲಾ ಟಿವಿ ಚಾನೆಲ್ ಗಳು ಮತ್ತು ಸುದ್ದಿಪತ್ರಿಕೆಗಳನ್ನು ನೋಡಿದ ನಂತರ ಅಹಿತಕರ ಅನುಭವವಾಗಿ ಜನರು ನನ್ನನ್ನು ಕರೆಯುತ್ತಿದ್ದರು. ಅವರಿಗೆಲ್ಲ ನಾನು ಹೇಳಿದ್ದಿಷ್ಟೆ, ವಿದ್ಯುನ್ಮಾನ ಮಾಧ್ಯಮಗಳನ್ನು ಹಿಡಿತದಲ್ಲಿಟ್ಟುಕೊಂಡು ಮತಗಟ್ಟೆ ಸಮೀಕ್ಷೆಗಳನ್ನು ವಿಭಿನ್ನವಾಗಿ ತೋರಿಸಲಾಗುತ್ತಿದೆ. ಇನ್ನೆರಡು ದಿನ ಕಳೆದ ಮೇಲೆ ಸತ್ಯ ಹೊರಬರುತ್ತದೆ ಎಂದು ಶರದ್ ಪವಾರ್ ದಕ್ಷಿಣ ಮುಂಬೈಯಲ್ಲಿ ಇಫ್ತಾರ್ ಕೂಟವೊಂದರಲ್ಲಿ ಹೇಳಿದ್ದರು.
SCROLL FOR NEXT