ಚಿತ್ರದುರ್ಗ: ಕರ್ನಾಟಕದ ಮುಖ್ಯಮಂತ್ರಿಗಳ ಓಟ್ ಬ್ಯಾಂಕ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಏ.09 ರಂದು ಚಿತ್ರದುರ್ಗದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಸೇನೆ ವೈಮಾನಿಕ ದಾಳಿ ನಡೆಸಿದ್ದ ಸಂದರ್ಭದಲ್ಲಿ ಯೋಧರ ಸಾಹಸವನ್ನು ಪ್ರಸ್ತಾಪ ಮಾಡಿದರೆ ನಿರ್ದಿಷ್ಟ ಸಮುದಾಯಕ್ಕೆ ನೋವುಂಟಾಗುತ್ತದೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಾಕೋಟ್ ವೈಮಾನಿಕ ದಾಳಿಯನ್ನು ಸಂಭ್ರಮಿಸಿ, ಯೋಧರ ಸಾಹಸವನ್ನು ಪ್ರಸ್ತಾಪಿಸಿದರೆ ನಿರ್ದಿಷ್ಟ ಸಮುದಾಯಕ್ಕೆ ನೋವಾಗುತ್ತದೆ, ಕೋಮು ಸೌಹಾರ್ದತೆ ಹದಗೆಡುತ್ತದೆ ಎಂಬ ಅರ್ಥದಲ್ಲಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಸಿಎಂ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಇಂದು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ ಕುಮಾರಸ್ವಾಮಿ ಅವರ ಓಟ್ ಬ್ಯಾಂಕ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ಎಂದು ಪ್ರಶ್ನಿಸಿದ್ದಾರೆ.
ಭಾರತಕ್ಕೆ ಇಂದು ಇಡೀ ವಿಶ್ವವೇ ಜೈಕಾರ ಹಾಕುತ್ತಿದೆ, ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿದ್ದರಿಂದ ಪಾಕಿಸ್ತಾನ ಹೆದರಿಕೊಂಡಿದೆ, ಪಾಕ್ ಗೆ ನೋವುಂಟಾಗಿದೆ. ಇಲ್ಲಿ ಕಾಂಗ್ರೆಸ್-ಜೆಡಿಎಸ್ ಗೆ ಕಣ್ಣೀರು ಬರುತ್ತಿದೆ ಎಂದು ಮೋದಿ ದೋಸ್ತಿಗಳ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.
ಕರ್ನಾಟಕದಲ್ಲಿ ಕೇವಲ ಸ್ವಾರ್ಥಕ್ಕಾಗಿ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರವನ್ನು ಸೋತ ಎರಡು ಪಕ್ಷಗಳು ಜೊತೆಗೂಡಿ ನಡೆಸುತ್ತಿದ್ದಾರೆ. ಎಲ್ಲಿ ಅವಕಾಶ ಸಿಗುತ್ತದೋ ಅಲ್ಲೆಲ್ಲಾ ಸಮಾಜವನ್ನು ಒಡೆದು ಆಳುವ ಯೋಜನೆ ಕಾಂಗ್ರೆಸ್ ನದ್ದಾಗಿದೆ. ರಾಜ್ಯ ಸರ್ಕಾರವನ್ನು ಯಾರು ನಡೆಸುತ್ತಿದ್ದಾರೆ ಯಾರಿಗೂ ಗೊತ್ತಿಲ್ಲ. ದೇಶದಲ್ಲೂ ಇಂಥಹದ್ದೇ ಸರ್ಕಾರ ರಚಿಸಲು ಯತ್ನಿಸುತ್ತಿದ್ದಾರೆ. ಒನಕೆ ಓಬವ್ವ, ಮದಕರಿ ನಾಯಕ ಚಿತ್ರದುರ್ಗದ ಕೋಟೆಯನ್ನು ರಕ್ಷಿಸಿದ್ದರು, ದೇಶವನ್ನೂ ಇದೇ ರೀತಿ ರಕ್ಷಿಸಬೇಕಿದೆ. ಪ್ರಧಾನ ಮಂತ್ರಿಗೆ ದೇಶದ ಜನತೆಯೇ ಹೈಕಮಾಂಡ್ ಆಗಿರಬೇಕು, ಇಷ್ಟೆಲ್ಲಾ ಸಾಧನೆಯಾಗಿರುವುದು ಮೋದಿ ಇಂದಲ್ಲ ನಿಮ್ಮಿಂದ ಎಂದು ಮೋದಿ ಜನತೆಗೆ ಹೇಳಿದ್ದಾರೆ.