ಬೆಂಗಳೂರು: ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಯಿಂದಾಗಿ 2014ರಲ್ಲಿದ್ದ ಮೋದಿ ಅಲೆ ಈ ಬಾರಿ ಅಷ್ಟಾಗಿ ಕಂಡುಬರುತ್ತಿಲ್ಲ. ಆದರೆ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ಎಂ, ವೀರಪ್ಪ ಮೊಯ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ಭಯವಂತೂ ಕಾಡುತ್ತಿದೆ.
ಮಾಜಿ ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಏಳು ಬಾರಿ ಗೆದಿದ್ದಾರೆ .ಆದರೆ, ಇದು ಧೀರ್ಘಕಾಲ ಮುಂದುವರೆಯುತ್ತದೆಯಾ ಎಂಬ ಪ್ರಶ್ನೆ ಕಾಡುತ್ತಿದೆ. ಬಿಜೆಪಿಯ ಮುನಿಸ್ವಾಮಿ ಪ್ರಬಲ ಪೈಪೋಟಿ ನೀಡುತ್ತಿದ್ದು, ಮುನಿಯಪ್ಪ ವಿರುದ್ಧ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.
ಮತ್ತೋರ್ವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರದ್ದು ಇದೇ ಪರಿಸ್ಥಿತಿ. ಕಲಬುರಗಿಯಿಂದ 11 ಸಂಸತ್ತು ಹಾಗೂ ಆಸೆಂಬ್ಲಿ ಚುನಾವಣೆ ಗೆದ್ದಿರುವ ಖರ್ಗೆ ಕೂಡಾ ಈ ಬಾರಿ ಪರಿಸ್ಥಿತಿ ಭಿನ್ನವಾಗಿ ಕಾಣುತ್ತಿದೆ.
ಉಮೇಶ್ ಜಾದವ್ ಖರ್ಗೆ ಅವರಿಗೆ ಪ್ರಮುಖ ಎದುರಾಳಿಯಾಗಿದ್ದು,ಮಾಲಿಕಯ್ಯ ಗುತ್ತೇದಾರ್, ಎಬಿ ಮಾಲಕರೆಡ್ಡಿ, ಬಾಬುರಾವ್ ಚಿಂಚನಸೂರ್ ವೈಜನಾಥ್ ಪಾಟೀಲ್ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಬಂಜಾರ ಸಮುದಾಯದ ಬಾಬುರಾವ್ ಚಾವ್ಹಾಣ್ ಖರ್ಗೆಗೆ ವೋಟ್ ಬ್ಯಾಂಕ್ ಆಗಿದ್ದಾರೆ.ಖರ್ಗೆ ಅವರನ್ನು ಈ ಬಾರಿ ಕಟ್ಟಿಹಾಕುವ ಪ್ರಯತ್ನದಲ್ಲಿ ಬಿಜೆಪಿ ಯತ್ನಿಸುತ್ತಿದೆ ಆದರೆ, ಇದರಲ್ಲಿ ಎಷ್ಟರಮಟ್ಟಿಗೆ ಯಶಸ್ವಿ ಆಗಲಿದೆ ಎಂಬುದುನ್ನು ಕಾದು ನೋಡಬೇಕಾಗಿದೆ.
ಇನ್ನೂ ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಗೆಲುವು ಅಷ್ಟು ಸುಲಭವಲ್ಲ, ಹಾಸನ ಕ್ಷೇತ್ರವನ್ನು ತನ್ನ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ತುಮಕೂರಿನಲ್ಲಿ ದೇವೇಗೌಡರು ಸ್ಪರ್ಧಿಸುತ್ತಿರುವುದರಿಂದ ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಇದೆ.
ಈ ಅಸಮಾಧಾನ ಚುನಾವಣೆ ಮೇಲೆ ಪ್ರಭಾವ ಬೀರಿದರೆ ದೇವೇಗೌಡರ ಗೆಲುವು ಅಂದುಕೊಂಡಷ್ಟು ಸುಲಭವಾಗಿಲ್ಲ. ಅತ್ತ ಹಾಸನ ಹಾಗೂ ಮಂಡ್ಯದಲ್ಲೂ ಜೆಡಿಎಸ್ ಅಭ್ಯರ್ಥಿಗಳಿಗೆ ಪ್ರಬಲ ಎದುರಾಳಿಗಳಿದ್ದಾರೆ. ಹಾಸನದಲ್ಲಿ ಬಿಜೆಪಿಯಿಂದ ಎ ಮಂಜು ಹಾಗೂ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಜೆಡಿಎಸ್ ಅಭ್ಯರ್ಥಿಗಳಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ