ಬೆಂಗಳೂರು: ಚುನಾವಣೆ ಪ್ರಚಾರದಲ್ಲಿ ಮಕ್ಕಳನ್ನು ಬಳಸಬಾರದೆಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದರೂ ಕೂಡ ಜೆಡಿಎಸ್ ತನ್ನ ಪ್ರಚಾರದಲ್ಲಿ ಪಕ್ಷದ ಚಿಹ್ನೆಯ ಗುರುತಾಗಿ ಬಾಲಕಿಯನ್ನು ಬಳಸಿಕೊಂಡಿದ್ದು ಈ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗಕ್ಕೆ(ಕೆಎಸ್ ಸಿಪಿಸಿಆರ್) ದೂರು ಹೋಗಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಜಿಲ್ಲಾಧಿಕಾರಿಗೆ ಪತ್ರ ಬರೆದು ವರದಿ ಸಲ್ಲಿಸುವಂತೆ ಮತ್ತು ಪಕ್ಷದ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯಲು ನಿರ್ಧರಿಸಿದೆ.
ಎರಡು ದಿನಗಳ ಹಿಂದೆ ಆಯೋಗಕ್ಕೆ ದೂರು ಬಂದಿದ್ದು ಅದರಲ್ಲಿ ಜೆಡಿಎಸ್ ಅಧ್ಯಕ್ಷ ಹೆಚ್ ಡಿ ದೇವೇಗೌಡರು ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪಕ್ಷದ ಗುರುತು ತೆನೆ ಹೊತ್ತ ಮಹಿಳೆಯಾಗಿ ಮಗುವೊಂದು ನಿಂತಿದ್ದು ಇದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿತ್ತು.