ತುಮಕೂರು: ಶಿವನ ಅರ್ಚಕರ ಮನೆ ಮೇಲೂ ಐಟಿ ದಾಳಿ ಮಾಡಿಸಿದ್ದಾರೆ. ಆ ಈಶ್ವರ ಬಿಜೆಪಿಯನ್ನು ಧೂಳೀಪಟ ಮಾಡುತ್ತಾನೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಐಟಿ ದಾಳಿ ವಿರುದ್ಧ ಶುಕ್ರವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವೇಗೌಡರ ಕುಟುಂಬದ ದೇವರು ಹರದನಹಳ್ಳಿ ಈಶ್ವರ ದೇಗುಲದ ಮೇಲೆ ಹಾಗೂ ದೇವಾಲಯದ ಅರ್ಚಕ ಪ್ರಕಾಶ್ ಭಟ್ ಅವರ ಮನೆ ಮೇಲಿನ ದಾಳಿ ಖಂಡಿಸಿದ ಸಿಎಂ, ಐಟಿ ಇಲಾಖೆಯನ್ನು ಬಿಜೆಪಿಯ ಇಲಾಖೆ ಎಂದು ಟೀಕಿಸಿದ್ದಾರೆ. ಅಲ್ಲದೇ, ಈಶ್ವರನ ದೇವಾಲಯದ ಒಳಕ್ಕೆ ಕಾಲಿಟ್ಟಿರುವುದರಿಂದ ಬಿಜೆಪಿಯನ್ನು ಆ ಶಿವ ಈ ಚುನಾವಣೆಯಲ್ಲಿ ಧೂಳೀಪಟ ಮಾಡಲಿದ್ದಾನೆ ಎಂದು ಗುಡುಗಿದ್ದಾರೆ.
ಕುಣಿಗಲ್ನಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಪುಟ್ಟರಾಜು ಮನೆ ಮೇಲೆ 10 ದಿನದಲ್ಲಿ 2 ಬಾರಿ ಐಟಿ ದಾಳಿ ಮಾಡಿದ್ದಾರೆ. ಅರಗನಹಳ್ಳಿಯ ಶಿವನ ಅರ್ಚಕರ ಮನೆಗೂ ದಾಳಿ ಮಾಡಿದ್ದಾರೆ. ದೇವಾಲಯದ ಗರ್ಭಗುಡಿಗೂ ಹೋಗಿ ಐಟಿಯವರು ಪರಿಶೀಲಿಸಿದ್ದಾರೆ. ದೇವೇಗೌಡರ ಕುಟುಂಬದ ದುಡ್ಡಿದೆ ಎಂದು ದಾಳಿ ಮಾಡಿದ್ದಾರೆ. ಆದರೆ ಅವರಿಗೆ ಏನು ಸಿಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
30-50 ಕೋಟಿ ರೂ ಹಣದ ಆಮಿಷ ಒಡ್ಡಿ ಸರ್ಕಾರ ಅಭದ್ರತೆ ಮಾಡಲು ಬಿಜೆಪಿಯವರು ಮುಂದಾಗಿದ್ದರು. ಆದರೆ, ಇದನ್ನೆಲ್ಲಾ ಮೆಟ್ಟಿನಿಂತು ನಾವು ಹೊರಟಿದ್ದೇವೆ. ಈಗ ಐಟಿ ಅಸ್ತ್ರವನ್ನು ನಮ್ಮ ಮೇಲೆ ಬಳಸಲು ಮುಂದಾಗಿದ್ದಾರೆ. ಆದರೆ ಆ ಶಿವ ಇವರನ್ನು ಸುಮ್ಮನೆ ಬಿಡುವುದಿಲ್ಲ ಎಂದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos