ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ರೈತನ ಮಗ, ಜಿಲ್ಲೆಯ ಮಗನಾಗಿ ನಿಮ್ಮಗಳ ಸೇವೆಗಾಗಿ ಪಣತೊಟ್ಟಿದ್ದಾನೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಪಾಂಡವಪುರದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ಭತ್ತ ನಾಟಿ, ಹೊಲದ ಬಿತ್ತನೆ, ಕಬ್ಬು ಕಟಾವ್ ಬಗ್ಗೆ ನಿಖಿಲ್ ಕುಮಾರಸ್ವಾಮಿಗೆ ತಿಳುವಳಿಕೆ ನೀಡಿದ್ದೀರಿ. ಆತ ಇಲ್ಲಿಯೇ ಇದ್ದು, ಜನರ ಸೇವೆ ಮಾಡುತ್ತೇನೆ ಎಂದರು.
ಇನ್ನೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಮುಂದೆ ಬಾರದವರು ಇದೀಗ ಸ್ವಾಭಿಮಾನಕ್ಕಾಗಿ ಬಂದಿದ್ದಾರಂತೆ, ಅವರ ಮಾತುಗಳಿಗೆ ಮರುಳಾಗಬೇಡಿ ಎಂದರು.
ನಾನು ಕೂಡಾ ಹಲವು ಸಿನಿಮಾಗಳನ್ನು ಮಾಡಿದ್ದೇನೆ, ಸಿನಿಮಾ ಬೇರೆ ನಿಜ ಜೀವನದ ಚಿತ್ರವೇ ಬೇರೆ. ಅದನ್ನು ನಂಬಬೇಡಿ. ಅನುಕಂಪದ , ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಇಸ್ರೇಲ್ ಗೆ ಹೋಗಿದ್ದಲೇ ತಾನು ಸಾಯಬೇಕಿತ್ತು. ಆದರೆ, ನಿಮ್ಮಗಳ ಆಶೀರ್ವಾದದಿಂದ ಮರಳಿ ಬಂದಿದ್ದೇನೆ. ಸರ್ಕಾರ ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ . ಐದು ವರ್ಷ ಪೂರ್ಣಗೊಳಿಸುವುದಾಗಿ ಹೇಳಿದರು.
ಇದೇ ವೇಳೆ ಮಾತನಾಡಿದ ಜೆಡಿಎಸ್ ಮುಖಂಡ ಸಿ.ಎಸ್. ಪುಟ್ಟರಾಜು, ಚುನಾವಣೆಯಲ್ಲಿ ಗೆದ್ದ ಬಳಿಕ ಬಿಜೆಪಿ ಸೇರುವುದಾಗಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ನೀಡಿರುವ ಹೇಳಿಕೆಯ ವಿಡಿಯೋವನ್ನು ಚುನಾವಣೆ ನಂತರ ಬಿಡುಗಡೆ ಮಾಡುವುದಾಗಿ ಹೊಸ ಬಾಂಬ್ ಹಾಕಿದರು.
ಸುಮಲತಾ ಅಂಬರೀಷ್ ಗೆದ್ದ ಬಳಿಕ ಮೋದಿ ಸಂಪುಟದಲ್ಲಿ ಸಚಿವ ಸ್ಥಾನ ಕೊಡಿಸುವಂತೆ ಕೇಳಿರುವುದು ವಿಡಿಯೋದಲ್ಲಿದೆ. ಮಂಡ್ಯದಲ್ಲಿ ಅಭ್ಯರ್ಥಿ ಹಾಕಲು ಯೋಗ್ಯತೆ ಇಲ್ಲದ ಬಿಜೆಪಿ ಪಕ್ಷೇತರ ಅಭ್ಯರ್ಥಿ ಬೆಂಬಲಿಸುತ್ತಿದೆ ಎಂದು ಕಿಡಿಕಾರಿದರು.