ದಾವಣಗೆರೆ: ಸಿಎಂ ಕುಮಾರಸ್ವಾಮಿ ರಾಜ್ಯದ ರೈತರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ, ರೈತರ ಸಾಲಗಳನ್ನು ಅವರು ಮನ್ನಾ ಮಾಡಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ಕರ್ನಾಟಕ ಭ್ರಷ್ಟಾಚಾರ ನಡೆಸಲು ಎಟಿಎಂ ಇದ್ದಂತೆ ಎಂದು ಕೂಡ ಟೀಕಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೇಶವನ್ನು ಆಳುವವರು ಯಾರು ಎಂಬ ಆಯ್ಕೆ ನಿಮ್ಮ ಮುಂದಿದೆ. ಅಭಿವೃದ್ಧಿಯ ಮಾನದಂಡ ಹೊಂದಿರುವ ಎನ್ಡಿಎ ಒಂದೆಡೆಯಾದರೆ, ಮತ್ತೊಂದೆಡೆ ರಾಹುಲ್ ಅಂಡ್ ಟೀಮ್ ಇದೆ. ಯಾರಾಗಬೇಕೆಂದು ನೀವೇ ನಿರ್ಧರಿಸಿ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಅವರು ಇಂದು ದಾವಣಗೆರೆಯ ಹೊನ್ನಾಳಿ ತಾಲೂಕಿನಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಮ್. ಸಿದ್ದೇಶ್ ಪರ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಭಾಷಣ ಮಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದರು, ಕಳೆದ ಹಲವು ವರ್ಷಗಳಿಂದ ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಬಾಬಾ ರಾಹುಲ್ ಅಂಡ್ ಟೀಮ್ ಅನ್ನು ಪ್ರಶ್ನೆ ಮಾಡುತ್ತಲೇ ಇದ್ಧೇನೆ. ಆದರೆ, ಅವರು ಈವರೆಗೆ ಅದಕ್ಕೆ ಉತ್ತರ ನೀಡಿಲ್ಲ. ಆದರೆ ನಿಮ್ಮ ಪ್ರಧಾನಿ ಯಾರಾಗಬೇಕು ಎಂಬ ಆಯ್ಕೆ ನಿಮ್ಮ ಮುಂದಿದೆ ಅದನ್ನು ನೀವೆ ನಿರ್ಧರಿಸಿ ಎಂದು ಹೇಳಿದರು.
ಕಳೆದ 4 ವರ್ಷಗಳಿಂದ ಇಡೀ ದೇಶ ಸುತ್ತಿ ಇಲ್ಲಿಗೆ ಬಂದಿದ್ದೇನೆ. ನಾನು ಹೋದಲ್ಲೆಲ್ಲ ಮೋದಿ ಮೋದಿ ಎಂಬ ಘೊಷಣೆ ಮೊಳಗುತ್ತಿದೆ. ಮೋದಿ ದೇಶದ ನಾಯಕರು ಆದರೆ, ನಾಯಕರೆ ಇಲ್ಲದವರು ಇಂದು ದೇಶ ಮುನ್ನಡೆಸಲು ಬರುತ್ತಿದ್ದಾರೆ. ಇಂತವರಿಗೆ ಅವಕಾಶ ಮಾಡಿಕೊಡದೆ ಬಿಜೆಪಿಗೆ ಮತ ನೀಡಿ ಎಂದು ಕೇಳಿಕೊಂಡರು.