ಕರ್ನಾಟಕ

ಬೆಂಗಳೂರು: ಪ್ರಚಾರದ ವೇಳೆ ಬಲವಂತವಾಗಿ ಮುಸ್ಲಿಂ ಧ್ವಜ ತೆರವುಗೊಳಿಸಿದ ಬಿಜೆಪಿ ಕಾರ್ಪೊರೇಟರ್!

Srinivasamurthy VN
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರದ ವೇಳೆ ಬಿಜೆಪಿ ಕಾರ್ಪೋರೇಟರ್ ಒಬ್ಬರು ಮುಸ್ಲಿಂ ಸಮುದಾಯದ ಧ್ವಜವನ್ನು ಬಲವಂತವಾಗಿ ತೆರವುಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.
ನಗರದ ಬೊಮ್ಮನಹಳ್ಳಿ ಬಿಜೆಪಿ ಕಾರ್ಪೋರೇಟರ್ ಸಿ.ಆರ್. ರಾಮ್‍ ಮೋಹನ್‍ ರಾಜು ಅವರು ವಿರಾಟ್‍ ನಗರದ ಸಯ್ಯದ್ ಶರೀಫ್‍ ಎಂಬವರು ಮನೆಯ ಮೇಲಿದ್ದ ಧಾರ್ಮಿಕ ಧ್ವಜವನ್ನು ಬಲವಂತವಾಗಿ ತೆರವುಗೊಳಿಸಿ ವಿವಾದ ಹುಟ್ಟುಹಾಕಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರದ ವೇಳೆ ಬಿಜೆಪಿಯ ಬಿಬಿಎಂಪಿ ಕಾರ್ಪೋರೇಟರ್ ಅವರು ವಿರಾಟ್‍ ನಗರದ ಸಯ್ಯದ್ ಶರೀಫ್‍ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಮನೆ ಮೇಲೆ ಹಾರಿಸಲಾಗಿದ್ದ ಹಸಿರು ಬಣ್ಣದ ಧಾರ್ಮಿಕ ಧ್ವಜವನ್ನು ಪಾಕಿಸ್ತಾನದ ಧ್ವಜವೆಂದು ಭಾವಿಸಿ ತೆಗೆಯುವಂತೆ ಹಾಗೂ ಮತ್ತೆಂದೂ ಬಾವುಟ ಹಾರಿಸದಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. 
ಮಾತ್ರವಲ್ಲ ಮನೆಯಲ್ಲಿದ್ದ ಶಹಜಹಾನ್‍ ಬೇಗಂ ಅವರಿಗೆ 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆ ಕೂಗುವಂತೆ ಬಲವಂತ ಮಾಡಿದ್ದಾರೆ. ಅವರು 'ಭಾರತ್ ಮಾತಾ ಕಿ ಜೈ' ಎಂದು ಹೇಳಿದ ಬಳಿಕ ವಂದೇ ಮಾತರಂ ಘೋಷಣೆ ಕೂಗುತ್ತಾ ಬಿಜೆಪಿ ಕಾರ್ಯಕರ್ತರು ಧ್ವಜವನ್ನು ತೆರವುಗೊಳಿಸಿ, ಧ್ವಜವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆ  ಮಾಲೀಕರು ಇದು ಪಾಕಿಸ್ತಾನಿ ಧ್ವಜವಲ್ಲ ಎಂದು ತಿಳಿಸಿದರೂ ಬಿಜೆಪಿ ಕಾರ್ಯಕರ್ತರು ವಂದೇ  ಮಾತರಂನ್ನು ಕೂಗುತ್ತಾ ಧ್ವಜ ತೆರವುಗೊಳಿಸಿದ್ದಾರೆಂದು ಸೈಯದ್  ಶರೀಫ್ ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಶರೀಫ್ ಅವರು, 'ಘಟನೆಯ ವೇಳೆ ಮಹಿಳೆ ಹೊರತುಪಡಿಸಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ಘಟನೆಯ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಕಾರ್ಪೋರೇಟರ್ ಕ್ಷಮಾಪಣೆ ಕೋರಬೇಕೆಂದು ಒತ್ತಾಯಿಸಿದ್ದಾರೆ. 
ಇನ್ನು ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ತಪ್ಪಿಸಲು ಬಿಜೆಪಿ ಬೆಂಬಲಿಗರು ಧ್ವಜವನ್ನು ಮನೆ ಮಾಲೀಕರಿಗೆ ಮರಳಿಸಿದ್ದಾರೆ. ಈ ಪ್ರಕರಣದ ಬಗ್ಗೆ ಚುನಾವಣಾ ಅಧಿಕಾರಿಗಳು ಸ್ವಯಂ ಪ್ರೇರಿತ ದೂರು ದಾಖಲಿಸುವುದಾಗಿ ಭರವಸೆ ನೀಡಿದ್ದಾರೆ. ಅಂತೆಯೇ ಬೆಂಗಳೂರು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತರು ಕೂಡ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಪ್ರಕರಣವನ್ನು ಪರಿಶೀಲಿಸುವಂತೆ ಹೇಳಿದ್ದು, ಶೀಘ್ರ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
SCROLL FOR NEXT