ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷರ ಮನೆ ಮೇಲೆ ಐಟಿ ಅಧಿಕಾರಿಗಳು ನಡೆಸಿದ್ದ ದಾಳಿ ವೇಳೆ ಸುಮಾರು 80.2 ಲಕ್ಷ ರೂ ನಗದು ಸಿಕ್ಕಿದ್ದು, ಈ ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಹಾಗೂ ಗ್ರಾಮೀಣ ಭಾಗದ ಬಿಜೆಪಿ ಮುಖಂಡರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಿಜೆಪಿ ಘಟಕಾಧ್ಯಕ್ಷ ವಿ.ಆರ್.ಹೆಗಡೆ ಅವರ ಚಿಪಗಿ ನಿವಾಸದ ಮೇಲೆ ಹಾಗೂ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೆಗಡೆಯವರ ಆಪ್ತ ಕೃಷ್ಣ ಎಸಳೆ ಅವರ ವಿವೇಕಾನಂದ ನಗರದಲ್ಲಿರುವ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿತ್ತು.
ಈ ವೇಳೆ ಅಧಿಕಾರಿಗಳಿಗೆ ಸುಮಾರು 80.2 ಲಕ್ಷ ರೂ ನಗದು, ಮೂರು ಮುಖಂಡರ ಮನೆಯಲ್ಲಿ ಸುಮಾರು 6.2 ಲಕ್ಷ ಮೌಲ್ಯದ ಚಿನ್ನಾಭರಣ ಪತ್ತೆಯಾಗಿತ್ತು. ಅಂತೆಯೇ ಅಧಿಕಾರಿಗಳು ದೇವಡಿಗ ಅವರ ಕಾರನ್ನು ಕೂಡ ಪರಿಶೀಲನೆ ಮಾಡಿದ್ದು. ಈ ವೇಳೆ ಕಾರಿನಲ್ಲಿ 5 ಸಾವಿರ ರೂಗಳಿರುವ ಎನ್ವಲಪ್ ಗಳು ಕೂಡ ಪತ್ತೆಯಾಗಿವೆ. ಈ ಎನ್ವಲಪ್ ಗಳಲ್ಲಿದ್ದ ಒಟ್ಟಾರೆ ಹಣದ ಮೌಲ್ಯ 9.2 ಲಕ್ಷ ರೂ ಎಂದು ಹೇಳಲಾಗಿದೆ. ಆರ್ ವಿ ಹೆಗಡೆ ಅವರ ನಿವಾಸದಲ್ಲಿ ಸುಮಾರು 71 ಲಕ್ಷ ರೂ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಕೃಷ್ಣ ಎಸಳೆ ಅವರು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಹಾಗೇ ಘಟಕಾಧ್ಯಕ್ಷರಾಗಿರುವ ಆರ್. ವಿ.ಹೆಗಡೆ ಅವರು ಕೃಷಿಕರೂ ಹೌದು. ಹುಬ್ಬಳ್ಳಿ ಐಟಿ ಕಚೇರಿಯ ಒಟ್ಟು 8 ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಬಿಜೆಪಿ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ್ ಅವರ ಸಿದ್ದಾರಪುರ ತಾಲೂಕಿನ ಹಣಜಿ ಬೈಲ್ನಲ್ಲಿರುವ ಮನೆ ಮೇಲೆ ಕೂಡ ಐಟಿ ದಾಳಿಯಾಗಿದ್ದು ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದರು.