ಬೆಂಗಳೂರು: ಹಿರಿಯ ನಟ ಹಾಗೂ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ವಿರುದ್ದ ರೈ ಕೆಂಡಮಂಡಲರಾಗಿದ್ದಾರೆ.
ಚರ್ಚಾ ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರನ್ನು ಭೇಟಿಯಾಗಿ, ಅವರಿಗೆ ಕೈ ಕುಲುಕಿದ್ದೆ. ಕಾಂಗ್ರೆಸ್ ಕಾರ್ಯಕರ್ತರು ಇದರ ಪೋಟೋ ತೆಗೆದುಕೊಂಡಿದ್ದರು. ನಂತರ ಅದನ್ನು ವಾಟ್ಸಾಪ್ ಗುಂಪಿನಲ್ಲಿ ಕಳುಹಿಸಿ ಪ್ರಕಾಶ್ ರೈ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಆದ್ದರಿಂದ ಅವರಿಗೆ ಮತ ನೀಡಿ ವ್ಯರ್ಥಮಾಡಬೇಡಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಿಜ್ವನ್ ಅರ್ಷದ್ ಅವರ ಆಪ್ತ ಸಹಾಯಕ ಮಾಜರ್ ಅಹ್ಮದ್ ಇದನ್ನ ಮಾಡಿದ್ದಾನೆ ಎಂದು ಪ್ರಕಾಶ್ ರೈ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
ಪ್ರಕಾಶ್ ರಾಜ್ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ , ಪ್ರಕಾಶ್ ರಾಜ್ ಅವರಿಗೆ ಮತ ನೀಡಿ ವ್ಯರ್ಥ ಮಾಡಿಕೊಳ್ಳಬೇಡಿ ಎಂಬ ಅಡಿಬರಹದಡಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕಾಶ್ ರೈ ಹಾಗೂ ರಿಜ್ವಾನ್ ಅರ್ಷದ್ ಪರಸ್ಪರ ಕೈ ಕುಲುಕುತ್ತಿರುವ ಪೋಟೋಗಳು ವೈರಲ್ ಆಗಿವೆ.