ಬೆಂಗಳೂರು: ನೀತಿ ಸಂಹಿತೆ ಉಲ್ಲಂಘಿಸಿದ ಆರೋಪದಡಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾ ಆಯೋಗಕ್ಕೆ ಮತ್ತೊಂದು ದೂರು ದಾಖಲಿಸಿದೆ.
ರಾಜ್ಯದಲ್ಲಿ ಗುರುವಾರ ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿದ್ದು, ಅಭ್ಯರ್ಥಿಗಳು ಮತದಾನದ ದಿನ ಪ್ರಚಾರ ಮಾಡುವಂತಿಲ್ಲ. ಆದರೆ ತೇಜಸ್ವಿ ಸೂರ್ಯ ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಮತಯಾಚನೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ತೇಜಸ್ವಿ ಸೂರ್ಯ ವಿರುದ್ಧ ಚುನಾವಣಾಧಿಕಾರಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮತದಾನ ಮಾಡಿದ ಬಳಿಕ ತೇಜಸ್ವಿ ಸೂರ್ಯ ವೋಟ್ ಮಾಡಿ ಜಸ್ಟ್ ಟ್ಯಾಗ್ ಅಭಿಯಾನ ಆರಂಭಿಸಿದ್ದರು.
ತೇಜಸ್ವಿ ಸೂರ್ಯ ತಮ್ಮ ಹೆಗಲ ಮೇಲೆ ರಾಷ್ಟ್ರಧ್ವಜದ ಫೋಟೋ ಹೊತ್ತುಕೊಂಡಿರುವಂತೆ ಫೋಟೋಶಾಪ್ ಮಾಡಿ ಆನ್ಲೈನ್ ಪ್ರಚಾರದಲ್ಲಿ ಬಳಸಿಕೊಂಡಿದ್ದಾರೆ ಎಂದು ಕಳೆದ ಬುಧವಾರ ಜಯನಗರ ಬಿಡಬ್ಲ್ಯೂಎಸ್ಎಸ್ಬಿ ಸಿಬ್ಬಂದಿ ಹೆಚ್.ಎಂ. ಹರೀಶ್ ಕುಮಾರ್ ಎಂಬುವವರು ತೇಜಸ್ವಿ ಸೂರ್ಯ ಹಾಗೂ ಅವರ ಬೆಂಬಲಿಗ ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಮತ್ತೊಂದು ದೂರು ದಾಖಲಾಗಿದೆ.