ಕರ್ನಾಟಕ

ಯಾರು ಗೆಲ್ತಾರೆ, ಸುಮಲತಾ ಇಲ್ಲ ನಿಖಿಲ್ ಕುಮಾರಸ್ವಾಮಿ: ಮಂಡ್ಯದಲ್ಲಿ ಬೆಟ್ಟಿಂಗ್ ಭರಾಟೆ!

Sumana Upadhyaya
ಮೈಸೂರು: ಹೈ ವೋಲ್ಟೇಜ್ ನ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಕಳೆದ ವಾರವಷ್ಟೇ ಮುಗಿದಿದೆ. ಆದರೆ ಜಿಲ್ಲೆಯಲ್ಲಿ ಇನ್ನೂ ಕೂಡ ಚುನಾವಣೆಯ ಕಾವು ಹಾಗೆಯೇ ಉಳಿದುಕೊಂಡಿದೆ. ಜಿಲ್ಲೆಯ ರಸ್ತೆ, ರಸ್ತೆಯ ಮೂಲೆಗಳಲ್ಲಿ, ಟೀ ಅಂಗಡಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲಿ ಹೋದರೂ ರಾಜಕೀಯದ ಬಿಸಿಬಿಸಿ ಚರ್ಚೆ ಯಾರು ಗೆಲ್ಲುತ್ತಾರೆ ಎಂದು.
ಸುಮಲತಾ ಅಂಬರೀಷ್ ಅಥವಾ ನಿಖಿಲ್ ಕುಮಾರಸ್ವಾಮಿ ಇಬ್ಬರಲ್ಲಿ ಯಾರು ಸಂಸತ್ತು ಪ್ರವೇಶಿಸುತ್ತಾರೆ ಮತ್ತು ಎಷ್ಟು ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು.
ಈ ಕುರಿತು ಜಿಲ್ಲೆಯಲ್ಲಿ ವ್ಯಾಪಕ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ನಿಖಿಲ್ ಕುಮಾರಸ್ವಾಮಿ ಸೋತರೆ ರಾಜ್ಯದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಮತ್ತು ಸರ್ಕಾರ ಉಳಿಯುತ್ತದೋ ಅಥವಾ ಉರುಳುತ್ತದೆಯೋ ಎಂದು ಸಹ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ದಾಖಲೆಯ ಶೇಕಡಾ 80.31ರಷ್ಟು ಮತದಾನವಾಗಿದೆ, 13 ಲಕ್ಷದ 74 ಸಾವಿರದ 189 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸುಮಲತಾ ಮತ್ತು ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಮತಗಟ್ಟೆಗಳ ಬಳಿ ತೆರಳಿ ಅಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಅನೇಕ ಹಳ್ಳಿಗಳಲ್ಲಿ ಎರಡೂ ಕಡೆಯವರ ಬೆಂಬಲಿಗರ ಮಧ್ಯೆ ಜಗಳ, ವ್ಯಾಗ್ಯುದ್ಧಗಳು ನಡೆಯುತ್ತಿವೆ. ತಮ್ಮ ಬೆಂಬಲಿಗರ ಮೇಲೆ ಜೆಡಿಎಸ್ ಕಾರ್ಯಕರ್ತರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸುಮಲತಾ ಅಂಬರೀಷ್ ಆರೋಪಿಸಿದ್ದಾರೆ.
SCROLL FOR NEXT