ಕರ್ನಾಟಕ

ಬೆಂ.ಗ್ರಾಮಾಂತರ ಕ್ಷೇತ್ರದ ಬಿಜೆಪಿ ಟಿಕೆಟ್‌ ಗೊಂದಲ: ಅಸಹಾಯಕತೆ ವ್ಯಕ್ತಪಡಿಸಿದ ಯಡಿಯೂರಪ್ಪ

Srinivasamurthy VN
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿಕೆಯಲ್ಲಿನ ಗೊಂದಲ ಮುಂದುವರೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅಸಾಹಯಕತೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಟಿಕೆಟ್ ಸಿ.ಪಿ.ಯೋಗೀಶ್ವರ್ ಅವರಿಗೆ ನೀಡದಂತೆ ಒತ್ತಾಯಿಸಿ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಬೆಂಬಲಿಗರು ಹಾಗೂ ಯೋಗೇಶ್ವರ್‌  ಬೆಂಬಲಿಗರು, ರಾಜ್ಯಾಧ್ಯಕ್ಷ  ಬಿ.ಎಸ್. ಯಡಿಯೂರಪ್ಪ ನಿವಾಸದ ಎದುರು ಜಮಾಯಿಸಿ, ಮಾತಿನ ಚಕಮಕಿ ನಡೆಸಿದಾಗ ಪೊಲೀಸರು ಎರಡೂ ಬಣಗಳನ್ನು ಚದುರಿಸಿದ ಘಟನೆ ಇಂದು ನಡೆಯಿತು.
ಬಿ.ಎಸ್. ಯಡಿಯೂರಪ್ಪ ಅವರು ನಿವಾಸದಿಂದ ಹೊರಬರುತ್ತಿದ್ದಂತೆ, ಸಿ.ಪಿ. ಯೋಗೇಶ್ವರ್ ಅಥವಾ ನಿಶಾ ಯೋಗೇಶ್ವರ್ ಗೆ ಟಿಕೆಟ್ ನೀಡಬಾರದು. ರಾಮನಗರ ಜಿಲ್ಲಾಧ್ಯಕ್ಷ ರುದ್ರೇಶ್ ಅಥವಾ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು ಎಂದು ರುದ್ರೇಶ್ ಬೆಂಬಲಿಗರು ಮನವಿ ಸಲ್ಲಿಸಿದರು. ಆಗ ಸಿ.ಪಿ.ಯೋಗೇಶ್ವರ್‌ ಬೆಂಬಲಿಗರು ಸಿ.ಪಿ.ಯೋಗೇಶ್ವರ್‌ ಅಥವಾ ನಿಶಾ ಯೋಗೇಶ್ವರ್‌ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಟಿಕೆಟ್‌ ನೀಡುವ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ಇದರಲ್ಲಿ ತಮ್ಮ ಪಾತ್ರವಿಲ್ಲ ಎಂದು ಸಮಜಾಯಿಸಿ ನೀಡಿದರು. ತಾವು ಈಗಾಗಲೇ ಶಿಫಾರಸ್ಸು ಕಳುಹಿಸಲಾಗಿದೆ. ಯಾರಿಗೆ ಟಿಕೆಟ್ ಕೊಡಬೇಕು ಎಂಬ ನಿರ್ಧಾರ ಹೈ ಕಮಾಂಡ್ ಗೆ ಬಿಟ್ಟಿದ್ದು. ತಾವು ಈಗ ಏನೂ ಮಾಡಲಾಗದು ಎಂದು ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಎಸ್ ವೈ ಅಸಹಾಯಕತೆ ವ್ಯಕ್ತಪಡಿಸಿದರು.
ಆದರೂ ಕಾರ್ಯಕರ್ತರ ಒತ್ತಾಯ ಹೆಚ್ಚಾದಾಗ, ಈ ವಿಷಯದಲ್ಲಿ ಏನು ಹೇಳಬೇಕೋ ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿ ಮನೆಯಿಂದ ಹೊರಟು ಹೋದರು. ಯಡಿಯೂರಪ್ಪ ಹೋದ ಬಳಿಕ ಉಭಯ ಬಣಗಳ ಕಾರ್ಯಕರ್ತರ ನಡುವೆ ಮಾತಿಕ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು. ತಕ್ಷಣ ಪೊಲೀಸರು ಮಧ್ಯಪ್ರವೇಶಿಸಿ ಎರಡೂ ಬಣದವರನ್ನು ಚದುರಿಸಿದರು.
SCROLL FOR NEXT