ಬೆಂಗಳೂರು: ಬೂತ್ ಮಟ್ಟದಲ್ಲಿ ಜಾಗೃತಿ ಮೂಡಿಸುವ ಗುಂಪಿನ ಭಾಗವಾಗಿ ಪ್ರಜಾಪ್ರಭುತ್ವ ಯೋಧರು(ಡೆಮಾಕ್ರಟಿಕ್ ವಾರಿಯರ್) ಎಂದು ನಾಗರಿಕರು ದಾಖಲು ಮಾಡಿಕೊಳ್ಳುವಂತೆ ಎರಡು ತಿಂಗಳ ಹಿಂದೆ ಮುಖ್ಯ ಚುನಾವಣಾಧಿಕಾರಿ ಕಚೇರಿಯಲ್ಲಿ ದಾಖಲಾತಿ ತೆರೆಯಲಾಗಿತ್ತು.
ಆದರೆ ಇಲ್ಲಿಯವರೆಗೆ ಕೇವಲ 163 ನಾಗರಿಕರು ಮಾತ್ರ ಕರ್ನಾಟಕದಲ್ಲಿ ಇದರಡಿ ದಾಖಲು ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯ ಭಾಗವಾಗಿ ಇದನ್ನು ಆರಂಭಿಸಲಾಗಿತ್ತು. ಇದನ್ನು ನಾವು ಜನವರಿಯಲ್ಲಿಯೇ ಆರಂಭಿಸಿದ್ದರೂ ಕೂಡ ರಾಜ್ಯಾದ್ಯಂತ ಕೆಲವರು ಮಾತ್ರ ದಾಖಲಾತಿ ಮಾಡಿಕೊಂಡಿದ್ದಾರೆ. ಬಹುಶಃ ಬಹುತೇಕ ಮಂದಿಗೆ ಇದರ ಬಗ್ಗೆ ತಿಳಿದಿಲ್ಲ. ಅದರ ಬಗ್ಗೆ ನಾವು ಕೂಡ ಹೆಚ್ಚು ಪ್ರಚಾರ ಮಾಡಲಿಲ್ಲ ಎಂದು ಚುನಾವಣಾ ಆಯೋಗದ ಜಂಟಿ ಅಧಿಕಾರಿ ಸೂರ್ಯ ಸೇನ್ ಹೇಳಿದರು.
ಡೆಮಾಕ್ರಟಿಕ್ ವಾರಿಯರ್ ನಡಿ ಯಾರು ಬೇಕಾದರೂ ದಾಖಲಾತಿ ಮಾಡಿಕೊಳ್ಳಬಹುದು. ಕರ್ನಾಟಕ ಚುನಾವಣೆ ಮಾಹಿತಿ ವ್ಯವಸ್ಥೆ ವೆಬ್ ಸೈಟ್ ನಲ್ಲಿ ಅಥವಾ ಚುನಾವಣೆ ಆಪ್ ನಲ್ಲಿ ತಮ್ಮ ವೋಟರ್ ಐಡಿ ಸಂಖ್ಯೆಯನ್ನು ಹಾಕಿ ಯಾರು ಬೇಕಾದರೂ ದಾಖಲಾತಿ ಮಾಡಿಕೊಳ್ಳಬಹುದು. ನಂತರ ಚುನಾವಣಾ ಆಪ್ ನಲ್ಲಿ ತಮ್ಮ ಸ್ಟೇಟಸ್ ನ್ನು ಅಪ್ ಡೇಟ್ ಮಾಡಿಕೊಂಡು ಮತ ಹಾಕಲು ಚುನಾವಣಾ ಮತಗಟ್ಟೆಗೆ ಬರುವ ಮುನ್ನ ಸರದಿಯಲ್ಲಿ ಎಷ್ಟು ಜನ ನಿಂತಿದ್ದಾರೆ ಎಂದು ತಿಳಿದುಕೊಳ್ಳಬಹುದು. ವೋಟಿಂಗ್ ದಿನ ಮತ ಹಾಕಲು ವೋಟರ್ ಸ್ಲಿಪ್ ಕಳೆದುಹೋಗಿದ್ದರೆ ಅಥವಾ ಸಿಗದಿದ್ದರೆ ಡೆಮಾಕ್ರಸಿ ವಾರಿಯರ್ ಮೂಲಕ ದಾಖಲಾತಿ ಮಾಡಿದ್ದರೆ ಸಾಕಾಗುತ್ತದೆ ಎಂದರು ಸೇನ್.