ಬೆಂಗಳೂರು: ಲೋಕಸಭೆ ಫಲಿತಾಂಶ ಘೋಷಣೆಯಾದ ನಂತರ ಜಾತ್ಯಾತೀತ ಜನತಾದಳ ರಾಷ್ಟ್ರಮಟ್ಟದಲ್ಲಿ ನಿರ್ಣಾಯಕ ಪಕ್ಷವಾಗುವುದು ಅನುಮಾನ ಎಂದು ಹೇಳಲಾಗಿದೆ. ಭಾನುವಾರ ಹೊರಬಿದ್ದ ಎಕ್ಸಿಟ್ ಪೋಲ್ ಗಳಲ್ಲಿ ಸಹ ಪಕ್ಷ ಉತ್ತಮ ಸಾಧನೆ ಮಾಡುವ ಬಗೆಗೆ ಯಾವ ಸುಳಿವೂ ಇಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಮುಖ್ಯಸ್ಥ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ತಮ್ಮ ಕುಟುಂಬ ಸದಸ್ಯರ ಗೆಲುವನ್ನಷ್ಟೇ ಖಾತ್ರಿ ಪಡಿಸಿಕೊಳ್ಳುವತ್ತ ಗಮನ ಹರಿಸುತ್ತಿದ್ದಾರೆ ಹೊರತು ಪಕ್ಷದ ರಾಷ್ಟ್ರೀಯ ಮಹತ್ವಾಕಾಂಕ್ಷೆ, ರಾಷ್ಟ್ರಮಟ್ಟದ ಸರ್ಕಾರದಲ್ಲಿ ಮುಖ್ಯ ಪಾತ್ರ ವಹಿಸಬೇಕಾಗುವ ಕುರಿತು ಹೆಚ್ಚು ಮುತುವರ್ಜಿವಹಿಸಿಲ್ಲ ಎನ್ನಲಾಗುತ್ತಿದೆ.
ದೇವೇಗೌಡರ ಇಬ್ಬರೂ ಮೊಮ್ಮಕ್ಕಳಾದ ಪ್ರಜ್ವಲ್ ಹಾಗೂ ನಿಖಿಲ್ ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವವರಾದರೂ ನೇರವಾಗಿ ಡೆಲ್ಲಿ ದರ್ಬಾರ್ ಪ್ರವೇಶಿಸುವ ಉತ್ಸಾಹದಲ್ಲಿದ್ದಾರೆ. ಆದರೆ ಇದೇ ವೇಳೆ ಪಕ್ಷದಲ್ಲಿನ ಹಿರಿಯ ನಾಯಕರು, ಸ್ಥಳೀಯ ಮುಖಂಡರಿಗೆ ಪಕ್ಷವು ಭಾರೀ ನಿರಾಶೆಯನ್ನುಂಟುಮಾಡಿದೆ.
ಈ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ಕೆಲವೇ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಸಹ ನಿಖರವಾಗಿ ಅಲ್ಲಿನ ಎಲ್ಲಾ ಅಭ್ಯರ್ಥಿಗಳ ಗೆಲುವಿಗಿಂತ ದೇವೇಗೌಡರ ಕುಟುಂಬದ ಗೆಲುವೇ ಎಲ್ಲಕ್ಕಿಂತ ಮುಖ್ಯವಾಗಿತ್ತು.
ಈ ಮುನ್ನ ದೇವೇಗೌಡರು ಕೇವಲ ಹಳೆ ಮೈಸೂರು ಭಾಗಗಳಲ್ಲಷ್ಟೇ ಪ್ರಭಾವ ಬೀರಿದ್ದಲ್ಲದೆ ದೇಶವ್ಯಾಪಿ ಬಿಜೆಪಿ ಏತರ ಪಕ್ಷಗಳ ನಾಯಕರೊಡನೆ ಸಂಪರ್ಕ ಸಾಧಿಸಿ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಇರಾದೆ ಹೊಂದಿದ್ದರು. 2018ರಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ತಾವು ಅಧಿಕಾರ ಸ್ವೀಕಾರ ನಡೆಸುವ ವೇಳೆ ಬಿಜೆಪಿಯೇತರ ರಾಷ್ಟ್ರ ನಾಯಕರನ್ನು ಬೆಂಗಳೂರಿಗೆ ಆಹ್ವಾನಿಸಿದ್ದರು. ಇದು ಸಹ ದೇವೇಗೌಡರ ಯೋಜನೆಯೇ ಆಗಿದ್ದು ಅವರ ರಾಷ್ಟ್ರ ನಾಯಕರೊಂದಿಗಿನ ಒಡನಾಟದ ಪ್ರಭಾವವೂ ಇದರ ಹಿಂದೆ ಕೆಲಸ ಮಾಡಿತ್ತು. ಆದರೆ ಚುನಾವಣೆ ವೇಳೆ ಆದದ್ದು ಬೇರೆ!
ಎಕ್ಸಿಟ್ ಪೋಲ್ ಗಳನ್ನು ನೋಡಿದರೆ ಈ ಚುನಾವಣೆಯಲ್ಲಿ ಜೆಡಿಎಸ್ ಕೇವಲ ಎರಡು ಸ್ಥಾನಗಳಿಗೆ ಸೀಮಿತವಾಗಬಹುದು. ಇದರೊಂದಿಗೆ ಪಕ್ಷದ ರಾಷ್ಟ್ರಮಟ್ಟದ ಮಹತ್ವಾಕಾಂಕ್ಷೆಗಳು ತಟಸ್ಥವಾಗಲಿದೆ. ಚುನಾವಣಾ ಪ್ರಚಾರದ ವೇಳೆ ಜೆಡಿಎಸ್ ವಿರೋಧಿ ಮಾತುಗಳು ಕೇಳಿಬಂದದ್ದನ್ನು ಕಂಡರೆ ಇದೇನೂ ಅಚ್ಚರಿಯ ಬೆಳವಣಿಗೆ ಎನಿಸಲಾರದು.
ಸಾಮಾನ್ಯ ಗ್ರಹಿಕೆಯಂತೆ ಹೇಳಿದರೆ ಕಾಂಗ್ರೆಸ್ ನೊಂದಿಗಿನ ಮೈತ್ರಿ ಜೆಡಿಎಸ್ ಗೆ ಏನೇನೂ ಲಾಭದಾಯಕವಾಗಿ ಪರಿಣಮಿಸಿಲ್ಲ. ಮಂಡ್ಯ, ಹಾಸನಗಳಲ್ಲಿ ಹೊರತು ಬೇರೆಡೆಗಳಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಲುವುದಕ್ಕೆ ಇದು ಸಹಕಾರಿಯಾಗಿಲ್ಲ. ತುಮಕೂರಿನಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಪ್ರಾರಂಭದಲ್ಲಿ ನೇರವಾಗಿಯೇ ಟಕ್ಕರ್ ನೀಡಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಮೈತ್ರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಲಿಲ್ಲ ಎಂದು ಒಪ್ಪಿಕೊಂಡರು.ಮಂಡ್ಯದಲ್ಲಿ, ಸ್ಥಳೀಯ ಕಾಂಗ್ರೆಸ್ ನಾಯಕರು ನಟಿ ಸುಮಲತಾ ಅಂಬರೀಶ್ ಪರವಾಗಿದ್ದರು ಎಂಬ ಆರೋಪಗಳು ಕೇಳಿಬಂದಿದ್ದರಿಂದ ಮುಖ್ಯಮಂತ್ರಿಗಳು ತಾವು ಕಡೆಯ ನಾಲ್ಕು ದಿನಗಳ ಪ್ರಚಾರ ಕಾರ್ಯದ ವೇಳೆ ಕೇವಲ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಪ್ರಚಾರಕ್ಕಿಳಿಯಬೇಕಾಗಿ ಬಂದಿತ್ತು. ಎಂದರೆ ಸಿಎಂ ಕೇವಲ ಒಂದು ಕ್ಷೇತ್ರದ ಪ್ರಚಾರದಲ್ಲೇ ಹೆಚು ಸಮಯ ತೆಗೆದುಕೊಂಡರು. ಅದಕ್ಕಷ್ಟೇ ಸೀಮಿತ ಹೊಂದಿದ್ದರು.ಈ ಮಹಾಮೈತ್ರಿಯಿಂದಾಗಿ ಜೆಡಿಎಸ್ ಹೆಚ್ಚೆಂದರೆ ಮೂರು ಸ್ಥಾನ ಗೆಲ್ಲಬಹುದು. ಅದಾಗ್ಯೂ ಆ ಸಂಖ್ಯೆ ಇನ್ನಷ್ಟು ತಗ್ಗುವ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗದೆ, ಜನರ ಅಂತಿಮ ತೀರ್ಪು ಇದನ್ನು ನಿರ್ಧರಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿಯನ್ನು ಪ್ರಧಾನಿಯಾಗಿಸುವುದು ನನ್ನ ಗುರಿ ಎಂದಿದ್ದ ದೇವೇಗೌಡರು ತಾವು ತಮ್ಮ ಕುಟುಂಬ ಸದಸ್ಯರ ಹೊರತು ಉಳಿದೆಡೆಗಳಲ್ಲಿ ಅಷ್ಟೋಂದು ಪ್ರಭಾವಶಾಲಿ ಅಭ್ಯರ್ಥಿಗಳನ್ನು ಹಾಕಿಲ್ಲ ಎಂಬುದೂ ಪ್ರತಿವಾದಿಗಳ ಮನದಲ್ಲಿದೆ. ಇದು ಪ್ರತಿಪಕ್ಷ ಬಿಜೆಪಿಗೆ ದೊಡ್ಡ ಗೆಲುವು ಸಾಧಿಸಲು ಸುಲಭ ದಾರಿಯಾಗಲಿದೆಯೆ ಎನ್ನುವುದನ್ನು ಅಂತಿಮ ತೀರ್ಪಿನ ದಿನವೇ ಹೇಳಬೇಕು.