ಧಗೆ ಬಿಸಿಲು ಧುತ್ತೆಂದು ಆಗಮಿಸಿರುವ ಈ ಸಮಯದಲ್ಲಿ ಉಣ್ಣೆ ಬಟ್ಟೆಗಳನ್ನು ಮಡಚಿಟ್ಟು ತಂಪು ಪ್ರದೇಶಗಳಿಗೆ ಹಾತೊರೆಯುತ್ತಿರುವ ನೀವು ಇನ್ನು ಮುಂದೆ ಜೊತೆಗೆ ಒಂದು ಲೋಟ ಹೆಚ್ಚುವರಿ ನಿಂಬೆ ಪಾನಕವನ್ನೋ ಅಥವಾ ದೇಹಕ್ಕೆ ತಂಪು ನೀಡುವ ಇನ್ನಿತರ ಹಣ್ಣು-ಹಂಪಲುಗಳನ್ನೋ ಜೊತೆಗಿಟ್ಟುಕೊಳ್ಳಿ.
ಕೇವಲ ನೀರಷ್ಟೇ ನಿಮ್ಮ ದೇಹವನ್ನು ಈ ಅತಿ ಉಷ್ಣದಿಂದ ದೂರವಿಡುವುದಿಲ್ಲ, ತಂಪಾಗಿಡುವ ಈ ಪದಾರ್ಥಗಳ ಬಗ್ಗೆಯೂ ನಿಮಗೆ ತಿಳಿದಿರಲಿ.
ಕಲ್ಲಂಗಡಿ: ಬೇಸಿಗೆಯಲ್ಲಿ ಇದೆ ಹಣ್ಣಿನ ರಾಜ. ಈ ಹಣ್ಣಿನಲ್ಲಿ ೯೫% ಭಾಗ ನೀರಿನಿಂದ ಕೂಡಿರುತ್ತದೆ ಎಂದು ನಿಮಗೆ ತಿಳಿದಿದೆಯೇ?
ಈ ಕೆಂಪಗಿನ ಹಣ್ಣು ನಿಮ್ಮ ದೇಹದ ನೀರಿನ ಅಂಶವನ್ನು ಹೆಚ್ಚಿಸುವುದಲ್ಲದೆ, ಇದರ ಇತರ ಪೋಷಕಾಂಶಗಳು ಮಲಭಾದೆಯನ್ನು ತಡೆಗಟ್ಟಲು ಸಹಕರಿಸುತ್ತವೆ.
ಎಳನೀರು: ಬೇಸಿಗೆಯಲ್ಲಿ ಎಳನೀರು ಕುಡಿಯುವುದು ಬಹುಷಃ ಅಮೃತಕ್ಕೆ ಸಮ. ಈ ಕಾಲದಲ್ಲಿ ಬೆಲೆ ತುಸು ಹೆಚ್ಚಿದರೂ ದಿನಕ್ಕೊಂದು ಎಳನೀರು ಕುಡಿದು ಹೊಟ್ಟೆ, ದೇಹ ಮತ್ತು ತಲೆಯನ್ನು ತಂಪಾಗಿ ಇಟ್ಟುಕೊಳ್ಳುವುದು ಉತ್ತಮ ಮಾರ್ಗ.
ಸೌತೆಕಾಯಿ: ಈ ತರಕಾರಿಗೆ ಆಂಗ್ಲಭಾಷೆಯಲ್ಲಿ ಒಂದು ನಾಣ್ಣುಡಿಯಿದೆ. ಸೌತೆಯಷ್ಟೇ 'ಕೂಲ್' ವ್ಯಕ್ತಿ ಎಂದು. ಮೊಸರು ಬಜ್ಜಿ, ಕೋಸಂಬರಿ ಮುಂತಾದವಕ್ಕೆ ಅಗತ್ಯವಾದ ಸೌತೆಕಾಯಿಯಲ್ಲಿನ ಅಂಶಗಳು ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕುವುದಕ್ಕೂ ಸಹಕಾರಿ. ಇದು ಜೀರ್ಣಕ್ಕೂ ಸಹಕರಿಸಿ ಬಾಯಾರಿಕೆಯನ್ನು ತಣಿಸುತ್ತದೆ.
ಪುದಿನ: ಯಾವುದೇ ಡೆಸರ್ಟ್ ಖಾದ್ಯ ಪುದಿನ ಇಲ್ಲದೆ ಅಪೂರ್ಣ. ಘಮ ಘಮಿಸುವ ವಾಸನೆಗೂ ಸೈ ಆರೋಗ್ಯಕ್ಕೂ. ಇದರ ತಂಪಾದ ತಾಜಾ ಘಮಲು ಬಾಯಿಯಲ್ಲಿ ಕೆಲವು ಎಂಜೈಮ್ ಗಳ ಉತ್ಪಾದನೆಗೆ ಸಹಕರಿಸಿ ಜೀರ್ಣಕ್ಕೆ ಸಹಕರಿಸುತ್ತದೆ. ಇದು ವಾಂತಿ ಮತ್ತು ತಲೆನೋವು ತಡೆಗೂ ಪರಿಣಾಮಕಾರಿ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos