ರಾಷ್ಟ್ರಕವಿ ಕುವೆಂಪು ಅವರ 'ಅಖಂಡ ಕರ್ಣಾಟಕ' ಕವನ 
ಕನ್ನಡ ಹಬ್ಬ

ರಾಷ್ಟ್ರಕವಿ ಕುವೆಂಪು ಅವರ "ಅಖಂಡ ಕರ್ಣಾಟಕ" ಕವನ

ರಾಷ್ಟ್ರಕವಿ ಕುವೆಂಪು ಅವರು ಬರೆದಿರುವ "ಅಖಂಡ ಕರ್ಣಾಟಕ" ಕವನ.

ಅಖಂಡ ಕರ್ಣಾಟಕ
ಅಲ್ತೋ ನಮ್ಮ ಕೂಗಾಟದ ರಾಜಕೀಯ  ನಾಟಕ!
 ಹರಸುತಿಹನು ದೇವ ಗಾಂಧಿ;
ಮಂತ್ರಿಸಿಹುದು ಋಷಿಯ ನಾಂದಿ;
ತನಗೆ ತಾನೆ ಋತಸ್ಯಂದಿ
ಅವಂಧ್ಯೆ ಕವಿಯ ಕಲ್ಪನೆ!
ಒರ್ವನಾದೊಡೋರ್ವನಲ್ತು 
ಶಕ್ತಿ ಸರ್ವನಲ್ಪನೆ?
ಹಿಂದದೊಂದು ಹಿರಿಯ ಕನಸು
ಇಂದು ಕೋಟಿ ಕೋಟಿ ಮನಸು
ಕೂಡಿ ಮೂಡಿ ನಿಂದ ನನಸು
ತಡೆವುದೇನೋ ನಿನ್ನ ಕಿನಿಸು
ಒಣರುವಲ್ಪ ಜಲ್ಪನೆ?
ಭುವನ ವಂದ್ಯೆ , ಕೇಳ್ , ಅವಂಧ್ಯೆ
ಕವಿಯ ವಿಂಧ್ಯ ಕಲ್ಪನೆ!
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!
ಇಂದು ಬಂದು ನಾಳೆ ಸಂದು
ಹೋಹ ಸಚಿವ ಮಂಡಲ
ರಚಿಸುವೊಂದು ಕೃತಕವಲ್ತೊ
ಸಿರಿಗನ್ನಡ ಸರಸ್ವತಿಯ
ವಜ್ರ ಕರ್ಣಕುಂಡಲ!
ಅಖಂಡ ಕರ್ಣಾಟಕ:
ಅಲ್ತೋ  ನಮ್ಮ ನಾಲ್ಕು ದಿನದ  ರಾಜಕೀಯ ನಾಟಕ!
ನೃಪತುಂಗನೆ ಚಕ್ರ ವರ್ತಿ!
ಪಂಪನಲ್ಲಿ ಮುಖ್ಯಮಂತ್ರಿ !
ರನ್ನ ಜನ್ನ ನಾಗವರ್ಮ
ರಾಘವಂಕ ಹರಿಹರ
ಬಸವೇಶ್ವರ ನಾರಣಪ್ಪ
ಸರ್ವಜ್ಞ ಷಡಕ್ಷರ :
ಸರಸ್ವತಿಯೆ ರಚಿಸಿದೊಂದು
ನಿತ್ಯ ಸಚಿವ ಮಂಡಲ
ತನಗೆ ರುಚಿರ ಕುಂಡಲ !
ಅಖಂಡ ಕರ್ಣಾಟಕ :
ಅಲ್ತೊ ನಮ್ಮ ಕೀರ್ತಿಶನಿಯ ರಾಜಕೀಯ ನಾಟಕ !
ಬರಿಯ ಹೊಟ್ಟೆ ಬಟ್ಟೆಗಲ್ತೊ ;
ಪಕ್ಷ ಜಾತಿ ಕಲಹಕಲ್ತೊ ;
ಹಮ್ಮು ಬಿಮ್ಮು ಸೊಮ್ಮಿಗಲ್ತೊ ;
ಬಣ್ಣ ಚಿಟ್ಟೆ ಬಾಳಿಗಲ್ತೊ ;
ಜೋಳವಾಳಿ ಕೂಳಿಗಲ್ತೊ ;
ದರ್ಪ ಸರ್ಪ ಕಾರ್ಕೋಟಕ 
ಸ್ವಾರ್ಥ ಫಣಾ ಕ್ರೀಡೆಗಲ್ತೊ
ರಾಜಕೀಯ ಪೇಟಕ
ಅಖಂಡ ಕರ್ಣಾಟಕ!
ಅಖಂಡ ಕರ್ಣಾಟಕ :
ಸರಸ್ವತಿಯೆ ರಚಸಿದೊಂದರಾಜಕೀಯ ತ್ರೋಟಕ !
ಮೆರೆಯಲಾತ್ಮ ಸಂಸ್ಕೃತಿ ;
ಬೆಳಗೆ ಜೀವ ದೀಧಿತಿ ;
ಪರಮಾತ್ಮನ ಚರಣ ದೀಪ್ತಿ
ಶರಣ ಹೃದಯಗಳಲಿ ಹೊತ್ತಿ
ಉಸಿರುಸಿರಿನ ಹಣತೆ ಬತ್ತಿ
ಉರಿಯಲೆಂದು ತಣ್ಣಗೆ ;
ಬಾಳ ಸೊಡರ್ ಗುಡಿಯ ನೆತ್ತಿ
ತನ್ನ ಮುಡಿಯ ಬಾನಿಗೆತ್ತಿ
ಸೊಗಸಲೆಂದು ರಸಸ್ಪೂರ್ತಿ
ಭಗವಂತನ ಕಣ್ಣಿಗೆ ;
ಹಾಡುತಿಹೆನು ಕಂಡ ನಾನು
ದಿಟ್ಟಿಗೇಡೊ ? ಹುಟ್ಟು ಕುರುಡೋ ?
ಬುದ್ಧಿ ಬರಡೋ ಬೇರೆ ಹುರುಡೊ?
ಮೆಳ್ಳಗಣ್ಣ, ಕಾಣೆ ನೀನು !
ಹೇಳು ! ತಪ್ಪು ನನ್ನದೇನು ?
ಕರ್ಣಾಟಕ ಎಂಬುದೇನು
ಹೆಸರೆ ಬರಿಯ ಮಣ್ಣಿಗೆ?
ಮಂತ್ರ ಕಣಾ ! ಶಕ್ತಿ ಕಣಾ !
ತಾಯಿ ಕಣಾ ! ದೇವಿ ಕಣಾ !
ಬೆಂಕಿ ಕಣಾ ! ಸಿಡಿಲು ಕಣಾ !
ಕಾವ ಕೊಲುವ ಒಲವ ಬಲವ
ಪಡೆದ ಚಲವ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ !
ವಿರೋಧಿಗಾಸ್ಫೋಟಕ,
ಕಂಡ ಕವಿಗಖಂಡ ದೇವಿ ಕಣಾ ಕರ್ಣಾಟಕ!
ಸರಸ್ವತಿಯೆ ರಚಿಸಿದೊಂದರಾಜಕೀಯ ತ್ರೋಟಕ !
ವಿರೋಧಿಗಾಸ್ಫೋಟಕ, 
ಅಖಂಡ ಕರ್ಣಾಟಕ :
ಅಲ್ತೊ ನಾವು ನರ್ತಿಪೊಂದು ರಾಜಕೀಯ ನಾಟಕ
ಅಖಂಡ ಕರ್ಣಾಟಕ !
ಅಖಡಂ ಕರ್ಣಾಟಕ !
ಜಯ್ ಜಯ್ ಜಯ್ ಅಖಂಡ ಕರ್ಣಾಟಕ !
- ಕುವೆಂಪು 
02-05-1949
- (ಇಕ್ಷುಗಂಗೋತ್ರಿ)

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT