ಮೈಸೂರು: ಮೈಸೂರು ಕಾಂಗ್ರೆಸ್ ನಾಯಕ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಮರಿಗೌಡ ಅವರು ಜಿಲ್ಲಾಧಿಕಾರಿಗೆ ಬೆದರಿಕೆ ಹಾಕಿ ಜೈಲು ಪಾಲಾದ ಬೆನ್ನಲ್ಲೇ ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್ .ರವಿಶಂಕರ್ ಅವರ ವಿರುದ್ಧ ಕೊಲೆ ಬೆದರಿಕೆ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ಮೈಸೂರು ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ವಿಶ್ವೇಶ್ವರ ನಗರದ ನಿವಾಸಿ ಹಾಗೂ ಉದ್ಯಮಿ ನಾಗಪ್ರಸಾದ್ ಅವರು ವಿದ್ಯಾರಣ್ಯಂ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರವಿಶಂಕರ್ ಅವರ ಸಹೋದರಿಯಿಂದ ನಾಗಪ್ರಸಾದ್ ಅವರು ನಿವೇಶನ ಖರೀದಿ ಮಾಡಿ ಹೆಚ್ಚು ಬೆಲೆಗೆ ಮಾರಾಟ ಮಾಡಿದ್ದರು. ಈ ವಿಚಾರದಲ್ಲಿ ತಕರಾರು ತೆಗೆದ ರವಿಶಂಕರ್ ಅವರ ಸಹೋದರಿಯರಾದ ಸುಜಾತ, ವಿಜಯಲಕ್ಷ್ಮಿ ಮತ್ತು ಬೆಂಬಲಿಗರು ಕಚೇರಿಗೆ ಆಗಮಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೊಪಿಸಿದ್ದು, ಹಲ್ಲೆ ನಡೆಸಿರುವ ಸಿಸಿಟಿವಿ ದೃಶ್ಯಗಳನ್ನೂ ಸಹ ಪೊಲೀಸರಿಗೆ ನೀಡಿದ್ದಾರೆ. ಅಲ್ಲದೆ ತಮಗೆ ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿದ್ದಾರೆ.