ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ದೇವಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಮಂಗಳೂರು: ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಪ್ರತಿಮೆಯನ್ನು ಸ್ವಾತಂತ್ರ್ಯ ಹೋರಾಟಗಾರರ ರಾಷ್ಟ್ರ ಗ್ಯಾಲರಿಯಲ್ಲಿ ಸ್ಥಾಪಿಸಲು ಇಲ್ಲಿನ ಜನರು ಸತತ ಮೂರು ದಶಕಗಳ ಕಾಲ ನಿರಂತರ ಹೋರಾಟ ನಡೆಸಬೇಕಾಯಿತು. ಇಲ್ಲಿಯ ತನಕ ರಾಣಿ ಅಬ್ಬಕ್ಕ ದೇವಿಯ ವೈಭವವನ್ನು ಉಳ್ಳಾಲ ಮತ್ತು ಕರಾವಳಿ ತೀರದಲ್ಲಿ ಆಚರಿಸಲಾಗುತ್ತಿತ್ತೇ ವಿನಃ ರಾಷ್ಟ್ರಮಟ್ಟದಲ್ಲಿ ಇರಲಿಲ್ಲ.
ಭಾರತದ 70ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಬಲಿದಾನ ಸ್ಮರಣೆ(ತ್ಯಾಗದ ಸ್ಮರಣೆ) ತಿರಂಗ ಯಾತ್ರೆ ಅಭಿಯಾನದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಅಬ್ಬಕ್ಕ ದೇವಿಯ ತ್ಯಾಗ, ಬಲಿದಾನವನ್ನು ಮೊಟ್ಟಮೊದಲ ಬಾರಿಗೆ ರಾಷ್ಟ್ರ ಮಟ್ಟದಲ್ಲಿ ಮಾಡುವಂತೆ ಮಾಡಲಾಯಿತು.
ಉಳ್ಳಾಲ ರಾಣಿ ಅಬ್ಬಕ್ಕ ದೇವಿ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ತಿಳಿದಾಗ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
ರಾಣಿ ಅಬ್ಬಕ್ಕಾ ದೇವಿಯ ಕುಟುಂಬದ 29ನೇ ತಲೆಮಾರಿನ ಕುಲ್ದೀಪ್ ಅಬ್ಬಕ್ಕ ಪರವಾಗಿ ಬಲಿದಾನ ಸ್ಮರಣೆ ಗೌರವವನ್ನು ಸ್ವೀಕರಿಸಿದರು. ಅವರು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯೊಂದಿಗೆ ಮಾತನಾಡಿ, 1888ರಲ್ಲಿ ರಚಿಸಲಾದ ವಂಶಾವಳಿಯ ಕರಡು ದಾಖಲೆಗಳನ್ನು ಹುಡುಕಿ ತೆಗೆದಿದ್ದು, ಅದನ್ನು ಕೋರ್ಟ್ ಗೆ ಸಲ್ಲಿಸಲಾಯಿತು. ತಮ್ಮ ಮುತ್ತಜ್ಜ 12 ವರ್ಷ ಕಾನೂನು ಹೋರಾಟ ನಡೆಸಿದರು. ಹೀಗಾಗಿ ಅದಕ್ಕೂ ಮೊದಲು ರಾಣಿ ಅಬ್ಬಕ್ಕನವರಿಗೆ ಸಂಬಂಧಪಡದ ಕುಟುಂಬಕ್ಕೆ ನೀಡಿದ್ದ ಪಟ್ಟ ಗೌರವವನ್ನು ನಂತರ ನಮ್ಮ ಮುತ್ತಜ್ಜರಿಗೆ ಕೊಡಲಾಯಿತು ಎಂದು ಸ್ಮರಿಸಿಕೊಂಡರು.
ಈ ತಪ್ಪಿನ ತಿದ್ದುವಿಕೆ ನಂತರ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ 1539ರಿಂದ 1599ರವರೆಗೆ ಹೋರಾಟ ನಡೆಸಿದ್ದರು ಎಂದು ದಾಖಲಿಸಲಾಗಿದೆ.
1530ರಿಂದ 1599ರವರೆಗೆ ಮೂವರು ಅಬ್ಬಕ್ಕರು ಆಳಿ ಹೋಗುತ್ತಾರೆ. ಆದರೆ ಉಳ್ಳಾಲದಲ್ಲಿ ಪೋರ್ಚುಗೀಸರ ವಿರುದ್ಧ ಹೋರಾಡಿ ಅವರನ್ನು ಸೋಲಿಸಿದವರು 1556ರ ಸಮಯದಲ್ಲಿ ಇದ್ದ ರಾಣಿ ಅಬ್ಬಕ್ಕ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಇತಿಹಾಸ ಹೇಳುತ್ತದೆ.
ಜೈನ ತತ್ವದ ಮೇಲೆ ನಂಬಿಕೆಯಿಟ್ಟಿದ್ದ ರಾಣಿ ಅಬ್ಬಕ್ಕ ಅವರ ಆಡಳಿತಾವಧಿಯಲ್ಲಿ ಎಲ್ಲಾ ಧರ್ಮದ ಅಧಿಕಾರಿಗಳಿದ್ದರು ಎನ್ನುತ್ತಾರೆ ಇತಿಹಾಸ ಪ್ರಾಧ್ಯಾಪಕ ತುಕಾರಾಂ ಪೂಜಾರಿ.
ರಾಣಿ ಅಬ್ಬಕ್ಕ ಅವರ ಗೌರವಾರ್ಥ ತುಕರಾಂ ಪೂಜಾರಿಯವರು ಬಂಟ್ವಾಳ ತಾಲ್ಲೂಕಿನಲ್ಲಿ ಸಂಗ್ರಹಾಲಯವೊಂದನ್ನು ಸ್ಥಾಪಿಸಿದ್ದಾರೆ. ಅದರಲ್ಲಿ, ಸಾಮ್ರಾಜ್ಯಶಾಹಿ ಪಡೆಗಳ ವಿರುದ್ಧ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮೊದಲ ಭಾರತೀಯ ಮಹಿಳೆ ಎಂದು ಹೇಳಲಾಗಿದೆ. ಬಿಜಾಪುರದ ಸುಲ್ತಾನ ಆದಿಲ್ ಶಾಹ್ ಮನೆತನದ ಚಂದ್ ಬಿಬಿ ಮತ್ತು ದೆಹಲಿಯ ರಜಿಯಾ ಸುಲ್ತಾನ ಮನೆತನದ ಆಡಳಿತದ ಮಾದರಿಯಲ್ಲಿ ಉಳ್ಳಾಲ ರಾಣಿ ಅಬ್ಬಕ್ಕ ದೇವಿಯ ಆಡಳಿತ ಕಂಡುಬರುತ್ತದೆ.
ಇಂದು ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ದೇವಿಯ ಪ್ರತಿಮೆ ತೀವ್ರ ಹದಗೆಟ್ಟ ಸ್ಥಿತಿಯಲ್ಲಿರುವುದರಿಂದ ಹೊಸ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕೆಂದು ಉಳ್ಳಾಲದ ಜನರು ಬಯಸುತ್ತಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos